ಭಾರತಕ್ಕೆ ಧನ್ಯವಾದ ಹೇಳಿದ ಇರಾನ್​! ಏಕೆ ಗೊತ್ತೆ 

ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷಗಳು ಜಾಗತಿಕವಾಗಿ ಗಮನ ಸೆಳೆಯುತ್ತಿವೆ. ಆದರೆ ಇತ್ತೀಚೆಗೆ ಇರಾನ್ ಭಾರತಕ್ಕೆ ಧನ್ಯವಾದ ಹೇಳಿದೆ.,ಯುದ್ಧದ ಮಧ್ಯದಲ್ಲೂ ಇರಾನ್​ ಭಾರತಕ್ಕೆ ಧನ್ಯವಾದ ಸಲ್ಲಿಸಿದ್ದು, ಈ ಘಟನೆಯನ್ನು ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ರಾಜ್ಯಸಭೆಯಲ್ಲಿ ವಿವರಿಸಿದ್ದಾರೆ. ಇದು ಎರಡೂ ದೇಶಗಳ ಮಧ್ಯದ ಸಂಬಂಧವನ್ನು ಬಲಪಡಿಸುತ್ತದೆ.

ಇರಾನ್‌ನ ಐಆರ್‌ಐಎಸ್ ದೇನಾ (IRIS Dena) ಎಂಬ ಯುದ್ಧನೌಕೆ ಭಾರತದ ಮಿಲನ್ ಕಾರ್ಯಕ್ರಮದಲ್ಲಿ ಭಾಗವಹಿಸಲು ಭಾರತಕ್ಕೆ ಬಂದಿತ್ತು. ಈ ಕಾರ್ಯಕ್ರಮ ಮುಗಿದ ನಂತರ ದೇನಾ ಹಿಂದಿರುಗುತ್ತಿರುವಾಗ ಶ್ರೀಲಂಕಾದ ಗಲ್ಲಾ ಬಳಿ ಸಮುದ್ರದಲ್ಲಿ ಅಮೆರಿಕಾ ಅದನ್ನು ಗುರಿಯಾಗಿಸಿಕೊಂಡಿತು. ಇದರಿಂದ ನೌಕೆ ಮುಳುಗಿ ಹೋಯಿತು. ಇದು ಇರಾನ್ ಮತ್ತು ಅಮೆರಿಕಾ ನಡುವಿನ ಹಿಂದಿನ ರಾಜತಾಂತ್ರಿಕ ಕಳವಳಗಳನ್ನು ಮತ್ತಷ್ಟು ಹೆಚ್ಚುಮಾಡಿತು.

ಈ ಘಟನೆಯ ನಂತರ ಇರಾನ್ ತನ್ನ ಮತ್ತೊಂದು ಯುದ್ಧನೌಕೆ ಐಆರ್‌ಐಎಸ್ ಲವನ್ (IRIS Lavan) ಅನ್ನು ಸುರಕ್ಷಿತವಾಗಿ ಡಾಕ್ ಮಾಡಲು ಭಾರತದ ಸಹಾಯ ಕೋರಿತು. ಭಾರತ ಸರ್ಕಾರ ತಕ್ಷಣವೇ ಪ್ರತಿಕ್ರಿಯಿಸಿ, ಮಾರ್ಚ್ 1, 2026ರಂದು ಅನುಮತಿ ನೀಡಿತು. ಐಆರ್‌ಐಎಸ್ ಲವನ್ ಮಾರ್ಚ್ 4, 2026ರಂದು ಕೊಚ್ಚಿ ಬಂದರಿನಲ್ಲಿ ಡಾಕಿಂಗ್ ಮಾಡಿತು. ನೌಕೆಯ ಸಿಬ್ಬಂದಿ ಭಾರತೀಯ ನೌಕಾ ನೆಲೆಯಲ್ಲಿ ಸುರಕ್ಷಿತವಾಗಿದ್ದಾರೆ. ಇದು ಮಾನವೀಯ ಆಧಾರದಲ್ಲಿ ಮಾಡಿದ ಕ್ರಮವಾಗಿದ್ದು, ಇರಾನ್ ಇದನ್ನು ಹೆಚ್ಚು ಮೆಚ್ಚಿಕೊಂಡಿದೆ. ಇರಾನ್‌ನ ವಿದೇಶಾಂಗ ಸಚಿವರು ಭಾರತಕ್ಕೆ ಧನ್ಯವಾದ ಹೇಳಿ, ಇದನ್ನು ಮಾನವೀಯ ಸಹಾಯ ಎಂದು ಹೊಗಳಿದ್ದಾರೆ‌.

ಈ ಘಟನೆಯ ಬಗ್ಗೆ ವಿದೇಶಾಂಗ ಸಚಿವ ಎಸ್. ಜೈಶಂಕರ್ ರಾಜ್ಯಸಭೆಯಲ್ಲಿ ಮಾತನಾಡಿದರು. ಪಶ್ಚಿಮ ಏಷ್ಯಾದಲ್ಲಿ ವಿಕಸನಗೊಳ್ಳುತ್ತಿರುವ ಪರಿಸ್ಥಿತಿಯ ಕುರಿತು ಚರ್ಚೆ ನಡೆದಾಗ ಅವರು ಈ ವಿವರಗಳನ್ನು ಹಂಚಿಕೊಂಡರು.

Share This Article