ಇಂದು ವರ್ಷದ ಮೊದಲ ಚಂದ್ರಗ್ರಹಣ ಸಂಭವಿಸುತ್ತಿದೆ. ಇದನ್ನು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ‘ಗ್ರಸ್ತೋದಯ ಚಂದ್ರಗ್ರಹಣ’ ಎಂದು ಕರೆಯಲಾಗುತ್ತದೆ. ಅಂದರೆ ಚಂದ್ರನು ಗ್ರಹಣ ಹಿಡಿದ ಸ್ಥಿತಿಯಲ್ಲೇ ಉದಯಿಸುತ್ತಾನೆ. ಇದನ್ನು ನೋಡಲು ಯಾವುದೇ ವಿಶೇಷ ಕನ್ನಡಕ ಅಥವಾ ರಕ್ಷಣಾ ಸಾಧನಗಳ ಅಗತ್ಯವಿಲ್ಲ, ಬರಿಗಣ್ಣಿನಿಂದಲೇ ವೀಕ್ಷಿಸಬಹುದು. ಮತ್ತೆ ಇಂತಹ ಚಂದ್ರಗ್ರಹಣವು 2028ರ ಜುಲೈ 6ರಂದು ಸಂಭವಿಸುವ ಸಾಧ್ಯತೆಯಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
ಮಧ್ಯಾಹ್ನ 3:20ಕ್ಕೆ ಆರಂಭವಾಗಲಿರುವ ಈ ಗ್ರಹಣದ ಪ್ರಭಾವ ಸಂಜೆ 6:47ರವರೆಗೆ ಇರಲಿದ್ದು, ಸಂಜೆ 5:32ರ ಸುಮಾರಿಗೆ ಗ್ರಹಣದ ತೀವ್ರತೆ ಗರಿಷ್ಠ ಮಟ್ಟದಲ್ಲಿರಲಿದೆ. ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ಹಲವೆಡೆ ಸುಮಾರು 25 ನಿಮಿಷಗಳ ಕಾಲ ಈ ಮನಮೋಹಕ ‘ಬ್ಲಡ್ ಮೂನ್’ ದೃಶ್ಯ ಗೋಚರಿಸಲಿದೆ. ಈ ಸಂದರ್ಭದಲ್ಲಿ ಪಾಲಿಸಬೇಕಾದ ಶಾಸ್ತ್ರೋಕ್ತ ನಿಯಮಗಳೇನು? ಗ್ರಹಣದ ನಂತರ ದೋಷ ನಿವಾರಣೆಗೆ ಮಾಡಬೇಕಾದ ಕಾರ್ಯಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ.

ಗ್ರಹಣ ಮುಗಿದ ತಕ್ಷಣ ಧರಿಸಿದ ಬಟ್ಟೆಗಳ ಸಮೇತ ತಲೆಸ್ನಾನ ಮಾಡಬೇಕು. ಇದರಿಂದ ಗ್ರಹಣದ ದೋಷ ನಿವಾರಣೆಯಾಗುತ್ತದೆ ಎಂಬ ನಂಬಿಕೆಯಿದೆ.ಪವಿತ್ರ ಜಲ ಅಥವಾ ಗಂಗಾಜಲದಿಂದ ಮನೆಯನ್ನು ಶುದ್ಧೀಕರಿಸಿ, ಅರಿಶಿನ ನೀರನ್ನು ಪ್ರೋಕ್ಷಣೆ ಮಾಡಬೇಕು. ಸ್ನಾನದ ನಂತರ ದೀಪ ಹಚ್ಚಿ ದೇವರ ದರ್ಶನ ಪಡೆಯಬೇಕು.
















