ಧಾರವಾಡ.. ದಾವಣಗೆರೆ.. ಮಡಿಕೇರಿ ಕೋರ್ಟ್ ಗಳಿಗೆ ಬಾಂಬ್ ಬೆದರಿಕೆ..!

1 Min Read

ಬೆಂಗಳೂರು: ಕಿಡಿಗೇಡಿಗಳು ನ್ಯಾಯಾಲಯವನ್ನು ಗುರಿಯಾಗಿಸಿಕೊಂಡು ಇದೀಗ ಬೆದರಿಕೆಯ ಇಮೇಲ್ ಗಳನ್ನ ಕಳುಹಿಸುತ್ತಿದ್ದಾರೆ. ಧಾರವಾಡ, ದಾವಣಗೆರೆ, ಮಡಿಕೇರಿ ನ್ಯಾಯಾಲಯಗಳಿಗೆ ಬಾಂಬ್ ಬೆದರಿಕೆಗಳು ಬಂದಿವೆ. ಮಡಿಕೇರಿ ಸಮುಚ್ಚಯಕ್ಕೆ‌ಅನಾಮಧೇಯ ವ್ಯಕ್ತಿ ಇಮೇಲ್ ಮೂಲಕ ಬಾಂಬ್ ಬೆದರಿಕೆಯನ್ನು ಹಾಕಿದ್ದಾನೆ. ಈ ವಿಚಾರವನ್ನು ಕೋರ್ಟ್ ಸಿಬ್ಬಂದಿ ಕೂಡ ತಕ್ಷಣ ಪೊಲೀಸರ ಗಮನಕ್ಕರ ತಂದಿದ್ದಾರೆ.

ಸ್ಥಳಕ್ಕೆ ಬಂದ ಪೊಲೀಸರು ಸಿಬ್ಬಂದಿಗಳನ್ನೆಲ್ಲಾ ಹೊರಗೆ ಕಳುಹಿಸಿ, ತಪಾಸಣೆ ಮಾಡಿದ್ದಾರೆ. ಬಾಂಬ್ ನಿಷ್ಟ್ರೀಯ ದಳ ಹಾಗೂ ಶ್ವಾನ ದಳ ಸಿಬ್ಬಂದಿಗಳು ಪರಿಶೀಲನೆ ನಡೆಸಿದ್ದಾರೆ. ಇದೇ ರೀತಿ ದಾವಣಗೆರೆಯ ನ್ಯಾಯಾಲಯಕ್ಕೆ ತಮಿಳುನಾಡಿನ ಮೂಲದ ವ್ಯಕ್ತಿ ಬಾಂಬ್ ಬೆದರಿಕೆ ಇಮೇಲ್ ಅನ್ನು ಕಳುಹಿಸಿದ್ದಾನೆ. ಇಂದು ಮಧ್ಯಾಹ್ನ 12.30ಕ್ಕೆ ಆರ್ಡಿಎಕ್ಸ್ ಬಾಂಬ್ ಸ್ಪೋಟವಾಗಲಿದೆ ಎಂದು ಜಡ್ಜ್ ಅವರ ಮೇಲ್ ಐಡಿಗೇನೆ ಬೆದರಿಕೆ ಮೇಲ್ ಕಳುಹಿಸಿದ್ದಾನೆ. ಅಲ್ಲಿಯೂ ಕೋರ್ಟ್ ಒಳಗಿದ್ದವರನ್ನೆಲ್ಲಾ ಹೊರಗೆ ಕಳುಹಿಸಿ, ಪರಿಶೀಲನೆ ನಡೆಸಲಾಗಿದೆ. ಧಾರವಾಡ ನ್ಯಾಯಾಲಯಕ್ಕೂ ಇಂಥದ್ದೇ ಬೆದರಿಕೆ ಮೇಲ್ ಗಳು ಬಂದಿವೆ.

ಈ ರೀತಿಯ ಮೇಲ್ ಗಳಿಗೆ ವಕೀಲರ ಸಂಘ ಆಕ್ರೋಶ ಹೊರ ಹಾಕಿದೆ. ಇತ್ತೀಚಿನ ದಿನಗಳಲ್ಲಿ ಕರ್ನಾಟಕದಲ್ಲಿ ಶಿಕ್ಷಣ ಸಂಸ್ಥೆಗಳು, ಸರ್ಕಾರಿ ಕಚೇರಿಗಳು ಹಾಗೂ ಸಾರ್ವಜನಿಕ ಸ್ಥಳಗಳಿಗೆ ಸಹ ಇಮೇಲ್ ಮೂಲಕ ಬಾಂಬ್ ಬೆದರಿಕೆ ಸಂದೇಶಗಳು ಬರುತ್ತಿರುವ ಘಟನೆಗಳು ಹೆಚ್ಚುತ್ತಿವರ. ಬಹುತೇಕ ಸಂದರ್ಭಗಳಲ್ಲಿ ಹುಸಿ ಬೆದರಿಕೆಗಳಾಗಿದ್ದರೂ, ಭದ್ರತಾ ದೃಷ್ಟಿಯಿಂದ ಪೊಲೀಸರು ಗಂಭೀರವಾಗಿ ಪರಿಗಣಿಸಿ ತಪಾಸಣೆ ನಡೆಸುತ್ತಿದ್ದಾರೆ. ಈ ರೀತಿಯ ಕೃತ್ಯಗಳಿಗೆ ಕಾರಣವಾಗಿರುವ ಕಿಡಿಗೇಡಿಗಳನ್ನು ಪತ್ತೆಹಚ್ಚಿ ಕಠಿಣ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಹಾಗೂ ವಕೀಲರ ಸಂಘಗಳು ಆಗ್ರಹಿಸಿವೆ.

Share This Article