ಚಿತ್ರದುರ್ಗ: 2025ರಲ್ಲಿ ಚಿತ್ರದುರ್ಗದ ರೈತರು ಬೆಳೆಹಾನಿಯಿಂದ ಸಂಕಷ್ಟಕ್ಕೆ ಸಿಲುಕಿದ್ದರು. ಖರೀಫ್ ಹಂಗಾಮಿನಲ್ಲಿ ಪ್ರಕೃತಿ ವಿಕೋಪದಿಂದ ಬೆಳೆಹಾನಿ ಸಮಸ್ಯೆಯನ್ನ ಅನುಭವಿಸಿದ್ದರು. ಆ ನಷ್ಟಕ್ಕೆ ಕೇಂದ್ರ ಸರ್ಕಾರ ಪರಿಹಾರವನ್ನ ಒದಗಿಸಿದೆ. 7,880 ರೈತರಿಗೆ ಬೆಳೆ ಹಾನಿ ಪರಿಹಾರವನ್ನು ನೀಡಿದೆ.
ಈ ಮೂಲಕ ರೈತರಿಗೆ ಸುಮಾರು 12.40 ಕೋಡಿ ಪರಿಹಾರ ಸಿಕ್ಕಿದೆ. ಲೋಕಸಭೆಯಲ್ಲಿ ಸಂಸದ ಗೋವಿಂದ ಕಾರಜೋಳ ಅವರು ಚುಕ್ಕೆ ರಹಿತ ಪ್ರಶ್ನೆಯನ್ನ ಕೇಳಿದರು. ಅದಕ್ಕೆ ಉತ್ತರಿಸಿದ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ರಾಜ್ಯ ಸಚುವ ಆರ್ ಎನ್ ಕೆ ಠಾಕೂರ್ ಅವರು ಲಿಖಿತ ರೂಪದಲ್ಲಿ ಉತ್ತರಿಸಿದ್ದಾರೆ. ಈ ಉತ್ತರದಲ್ಲಿ 2016ರಿಂದ ಕರ್ನಾಟಕದಲ್ಲಿ ಯಶಸ್ವಿಯಾಗಿ ಜಾರಿಯಲ್ಲಿದ್ದು, ಇದುವರೆಗೆ ರಾಜ್ಯದ 1.34 ಕೋಟಿ ಅರ್ಜಿಗಳಿಗೆ ಒಟ್ಟು 18,783 ಕೋಟಿ ರೂ. ಮೊತ್ತದ ಬೆಳೆ ವಿಮಾ ಪರಿಹಾರವನ್ನು ರೈತರಿಗೆ ಪಾವತಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ. ಚಿತ್ರದುರ್ಗ ಜಿಲ್ಲೆಯಲ್ಲಿ ಬಿಡುಗಡೆಯಾದ 12.40 ಕೋಟಿ ರೂ. ಪರಿಹಾರವು ಸಂಕಷ್ಟದಲ್ಲಿರುವ ರೈತ ಕುಟುಂಬಗಳಿಗೆ ಮಹತ್ವದ ಆರ್ಥಿಕ ನೆರವಾಗಿದ್ದು, ಅವರ ಜೀವನೋಪಾಯಕ್ಕೆ ಹೊಸ ಭರವಸೆ ನೀಡಿದೆ ಎಂದು ಸಂಸದ ಗೋವಿಂದ ಕಾರಜೋಳ ಹೇಳಿದ್ದಾರೆ.
ಒಟ್ನಲ್ಲಿ ರೈತನ ಬದುಕು ಅಂದುಕೊಂಡಷ್ಟು ಸುಲಭ ಅಲ್ಲ. ಬೆಳೆಯಲ್ಲಿ ಲಾಭ ಬಂದರೆ ಒಂದು ಸಲ ಕೈ ತುಂಬ ಬರುತ್ತೆ. ಪ್ರಕೃತಿ ಮುನಿಸಿಕೊಂಡರೆ ಅಷ್ಟೇ ಜೋರಾಗಿ ಕೈ ಸುಡುವಷ್ಟು ಸಾಲವೂ ಆಗುತ್ತದೆ. ಆದರೂ ರೈತನಿಗೆ ಭೂತಾಯಿಯೇ ದೇವರು. ಅವಳನ್ನ ಬಿಟ್ಟು ಕೊಡುವ ಮಾತೇ ಇಲ್ಲ. ಬೆಳೆ ನಷ್ಟವಾಗಿದ್ದಕ್ಕೆ ಕೇಂದ್ರ ಸಹಾಯ ಮಾಡಿರೋದು ರೈತರಿಗೆ ಅನುಕೂಲವಾದಂತಾಗಿದೆ.






