ಆರ್‌ಸಿಬಿ ಫ್ಯಾನ್ಸ್‌ಗೆ ಬಿಗ್‌ ಶಾಕ್‌ : ಬೆಂಗಳೂರಿಗಿಲ್ಲ ಕಿಕೆಟ್‌ ಯೋಗ

1 Min Read

ಕೊನೆಗೂ ಆರ್‌ಸಿಬಿ ಅಭಿಮಾನಿಗಳ ನಂಬಿಕೆ ಸುಳ್ಳಾಗಿದೆ. ಈ ವರ್ಷ ಆರ್‌ಸಿಬಿ ಮ್ಯಾಚ್‌ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತೆ ಎಂದು ಭಾವಿಸಿದ್ದ ಕ್ರಿಕೆಟ್‌ ಅಭಿಮಾನಿಗಳಿಗೆ ನಿರಾಸೆ ಉಂಟಾಗಿದೆ. ಈ ವರ್ಷ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ಆರ್‌ಸಿಬಿ ಮ್ಯಾಚ್‌ಗಳನ್ನು ಛತ್ತೀಸ್‌ಗಢದ ರಾಯ್‌ಪುರದಲ್ಲಿ ನಡೆಸಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮ್ಯಾನೇಜ್‌ಮೆಂಟ್‌ ನಿರ್ಧರಿಸಿದೆ. ಚಿನ್ನಸ್ವಾಮಿಯಲ್ಲೇ ಮ್ಯಾಚ್‌ ನಡೆಸಲು ಕೆಎಸ್‌ಸಿಎ ಅಧ್ಯಕ್ಷ ವೆಂಕಟೇಶ್‌ ಪ್ರಸಾದ್‌ ಸಾಕಷ್ಟು ಪ್ರಯತ್ನ ನಡೆಸಿದರೂ ಅದು ವಿಫಲವಾಗಿದೆ.

2026ರ ಐಪಿಎಲ್‌ನಲ್ಲಿ ಚಿನ್ನಸ್ವಾಮಿ ಸ್ಟೇಡಿಯಂ ಅನ್ನು ತವರು ಮೈದಾನವನ್ನಾಗಿ ಆಯ್ಕೆ ಮಾಡಿಕೊಳ್ಳದಿರಲು ಆರ್‌ಸಿಬಿ ತಂಡದ ಮ್ಯಾನೇಜ್‌ಮೆಂಟ್‌ ನಿರ್ಧರಿಸಿದೆ. ಆರ್‌ಸಿಬಿ ರಾಯ್‌ಪುರದಲ್ಲಿ 2 ಪಂದ್ಯಗಳನ್ನು ಆಡುವುದು ಖಚಿತವಾಗಿದೆ. ಇನ್ನುಳಿದ 5 ಪಂದ್ಯಗಳನ್ನು ನವಿ ಮುಂಬೈನ ಡಿ.ವಿ.ಪಾಟೀಲ್‌ ಕ್ರೀಡಾಂಗಣವನ್ನು ಆರಿಸಿಕೊಳ್ಳಲು ಮುಂದಾಗಿದೆ. ಜೂನ್ 4 ರಂದು ಚಿನ್ನಸ್ವಾಮಿಯಲ್ಲಿ ಆರ್‌ಸಿಬಿ ತಂಡದ ವಿಜಯೋತ್ಸವ ನಡೆಯುವ ವೇಳೆ ಉಂಟಾದ ಕಾಲ್ತುಳಿತದಲ್ಲಿ 11 ಮಂದಿ ಕ್ರಿಕೆಟ್‌ ಅಭಿಮಾನಿಗಳು ಉಸಿರು ಚೆಲ್ಲಿದ್ದರು. ಈ ಕಾಲ್ತುಳಿತ ದುರಂತ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ರಾಜ್ಯ ಸರ್ಕಾರ, ನ್ಯಾಯಾಂಗ ತನಿಖೆಗೆ ಆದೇಶ ನೀಡಿತ್ತು.

ತನಿಖೆಯ ವೇಳೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಲೋಪದೋಷಗಳು ಬಹಿರಂಗವಾಗಿದ್ದವು. ಅಲ್ಲದೆ, ಸ್ಟೇಡಿಯಂನಲ್ಲಿ ಭದ್ರತೆ, ಸುರಕ್ಷತೆಯ ಬಗ್ಗೆ ಪ್ರಶ್ನೆಗಳು ಎದ್ದಿದ್ದವು. ಈ ದುರಂತ ಪ್ರಕರಣದ ಬಳಿಕ ಬಿಸಿಸಿಐ ಬೆಂಗಳೂರಿನಲ್ಲಿ ಯಾವುದೇ ಅಂತರಾಷ್ಟ್ರೀಯ ಪಂದ್ಯಗಳನ್ನು ಆಯೋಜಿಸಿರಲಿಲ್ಲ. ಬೆಂಗಳೂರಿನಲ್ಲಿ ಐಪಿಎಲ್‌ ಸೇರಿದಂತೆ ಭಾರತದ ಯಾವುದೇ ಕ್ರಿಕೆಟ್‌ ಮ್ಯಾಚ್‌ ನಡೆದರೂ ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರು ಸೇರುತ್ತಾರೆ. ಹೀಗಾಗಿ ಮತ್ತೆ ದುರಂತಗಳು ಸಂಭವಿಸಬಹುದು ಎಂಬ ಕಾರಣಕ್ಕೆ ಮ್ಯಾಚ್‌ಗಳನ್ನು ಆಡದಿರಲು ಆರ್‌ಸಿಬಿ ತಂಡದ ಮ್ಯಾನೇಜ್‌ಮೆಂಟ್‌ ತೀರ್ಮಾನಿಸಿದೆ.

Share This Article
Enable Notifications OK No thanks