ದಾವಣಗೆರೆ: ಕಳೆದ ವಾರವಷ್ಟೇ ಜೆ.ಹೆಚ್.ಪಟೇಲ್ ಬಡಾವಣೆಯ ಉದ್ಯಾನವೊಂದರಲ್ಲಿ ಮಾದಕ ವಸ್ತುಗಳ ಮಾರಾಟಕ್ಕೆ ಯತ್ನಿಸಿದ್ದವರ ಮೇಲೆ ದಾಳಿ ನಡೆಸಲಾಗಿತ್ತು. ಈ ಸಂಬಂಧ ಪೊಲೀಸರು ತನಿಖೆಯನ್ನ ಚುರುಕುಗೊಳಿಸಿದ್ದಾರೆ. ಈಗಾಗಲೇ ಇದಕ್ಕೆ ಸಂಬಂಧಿಸಿದಂತೆ ಹಲವರ ಬಂಧನವಾಗಿದ್ದು, ಬಂಧಿತರ ಸಂಖ್ಯೆ 8ಕ್ಕೆ ಏರಿಕೆಯಾಗಿದೆ. ಈ ಸಂಬಂಧ ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಅವರ ಆಪ್ತ ಸೇರಿ ನಾಲ್ವರು ಅರೆಸ್ಟ್ ಆಗಿದ್ದಾರೆ. ಇದು ಭಾರೀ ಚರ್ಚೆಗೆ ಗ್ರಾಸವಾಗಿದೆ.
ವಸತಿ ಸಚಿವ ಬಿಝಡ್ ಜಮೀರ್ ಅಹ್ಮದ್ ಖಾನ್ ಅವರ ಆಪ್ತ ಹಾಗೂ ದಾವಣಗೆರೆಯ ನಿವಾಸಿ ಅನ್ವರ್ ಬಾಷಾ, ಪಾರಸ್, ಮಂಜುನಾಥ್ ಧೋನಿ ಹಾಗೂ ಕೃಷ್ಣಮೂರ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ನಾಲ್ಕು ಜನ ಈ ಕೇಸಲ್ಲಿ ಮೊದಲೇ ಬಂಧನವಾಗಿರುವ ಆರೋಪಿಗಳಿಂದ ಮಾದಕ ವಸ್ತುಗಳನ್ನ ಖರೀದಿಸಿದ್ದರು ಎಂಬ ಮಾಹಿತಿ ಇದೆ. ಖರೀದಿ ಮಾಡಿದ್ದಂತ ಮಾದಕ ವಸ್ತುಗಳನ್ನ ಬಳಸಿದ್ದಾರೋ ಇಲ್ಲವೋ ಎಂಬುದರ ಬಗ್ಗೆಯೂ ತನಿಖೆ ನಡೆಯುತ್ತಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ನೇತೃತ್ವದಲ್ಲಿ ಡ್ರಗ್ಸ್ ಜಾಲದಲ್ಲಿ ತೊಡಗಿದ್ದ ದುಷ್ಕರ್ಮಿಗಳನ್ನು ಹೆಡೆಮುರಿ ಕಟ್ಟಿರುವ ಪೊಲೀಸರ ಬಗ್ಗೆ ಜಿಲ್ಲೆಯಾದ್ಯಂತ ಪ್ರಶಂಸೆ ವ್ಯಕ್ತವಾಗಿದೆ. ಡಿ.22ರಂದು ಮಾದಕ ಜಾಲ ಭೇದಿಸಿದ್ದ ಪೊಲೀಸರು, ಆರೋಪಿಗಳಿಂದ 10 ಲಕ್ಷ ರೂ. ಮೌಲ್ಯದ 90 ಗ್ರಾಂ ಎಂ.ಡಿ.ಎಂ.ಎ ಹಾಗೂ 200 ಗ್ರಾಂ ಓಪಿಯಂ ಎಂಬ ಮಾದಕ ವಸ್ತುಗಳನ್ನು ಮತ್ತು ಮಾದಕ ವಸ್ತು ಮಾರಾಟ ಮಾಡಿ ಸಂಗ್ರಹಿಸಿದ್ದ 1 ಲಕ್ಷ ರೂ. ಸೇರಿ ಒಟ್ಟು 11 ಲಕ್ಷ ರೂ. ಮೌಲ್ಯದ ಸ್ವತ್ತು ವಶಪಡಿಸಿಕೊಂಡಿದ್ದರು.

