ಬೆಂಗಳೂರು: ಈ ವರ್ಷ ಈಗಾಗಲೇ ಮೈಕೊರೆಯುವ ಚಳಿ ಶುರುವಾಗಿದೆ. ಮುಂಜಾನೆಯೇ ಮಂಜು ಮುಸುಕಿದ ವಾತಾವರಣದ ಜೊತೆಗೆ ವಿಪರೀತವಾಗಿ ಚಳಿ ಕೂಡಾ ಆವರಿಸಿದೆ. ಜನರಿಗೆ ಚುಮು ಚಳಿಯ ಅನುಭವ ಹೆಚ್ಚಾಗುತ್ತಿದೆ. ಮನೆಯಿಂದ ಹೊರಗೆ ಕಾಲಿಟ್ಟರೆ ಸಾಕು ಮೈನಡುಗಿಸುವ ಚಳಿ ಅನುಭವಕ್ಕೆ ಬರುತ್ತಿದೆ.
ಈ ರೀತಿಯ ಮಂಜು ಮುಸುಕಿದ ವಾತಾವರಣ ನೋಡುವುದಕ್ಕೇನೆ ಚಿಕ್ಕಮಗಳೂರು, ಕೂರ್ಗ್ ಕಡೆಗೆ ಹೋಗ್ತಾರೆ. ಅಂತದ್ರಲ್ಲಿ ಈ ವರ್ಷ ನವೆಂಬರ್ ಅಂತ್ಯಕ್ಕೆ ಬಹುತೇಕ ಎಲ್ಲಾ ಜಿಲ್ಲೆಗಳಲ್ಲಿ ಇದೇ ರೀತಿ ಚಳಿ ಜೋರಾಗಿದೆ. ಬೆಂಗಳೂರು, ತುಮಕೂರು ಭಾಗದಲ್ಲಿ ತಣ್ಣನೆಯ ಗಾಳಿ ಬೀಸುತ್ತಿದೆ. ಹೊರಗೆ ಬರುವುದಕ್ಕೂ ಯೋಚನೆ ಮಾಡಬೇಕು ಆ ರೀತಿ ಚಳಿ ಇದೆ. ಇದರ ನಡುವೆ ಈಗ ಮಳೆ ಕೂಡ ಶುರುವಾಗಿದೆ.
ತಮಿಳುನಾಡಿನಲ್ಲಿ ದಿತ್ವಾ ಚಂಡಮಾರುತದ ಎಫೆಕ್ಟ್ ನಿಂದಾಗಿ ಈಗ ರಾಜ್ಯದಲ್ಲಿ ಮಳೆ ಶುರುವಾಗಿದೆ. ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಿಗೆ ಮಳೆಯಾಗಲಿದೆ. ಇನ್ನು ಹಲವು ಜಿಲ್ಲೆಗಳಲ್ಲಿ ಒಣ ಹವೆ ಮುಂದುವರೆಯಲಿದೆ. ಯಾದಗಿರಿ, ರಾಯಚೂರು, ಕೊಪ್ಪಳ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಮೈಸೂರು, ರಾಮನಗರ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಮಂಡ್ಯ, ಹಾಸನ, ಕೊಡಗು, ಚಿಕ್ಕಮಗಳೂರು, ಬಳ್ಳಾರಿ, ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ, ವಿಜಯನಗರ, ಉಡುಪಿ, ದಕ್ಷಿಣ ಕನ್ನಡ, ಬಾಗಲಕೋಟೆ, ಬೆಳಗಾವಿ, ಬೀದರ್ ಮಳೆಯಾಗುವ ಸಾಧ್ಯತೆಗಳಿವೆ. ಇನ್ನು ಗದಗ, ಹಾವೇರಿ, ಕಲಬುರಗಿ, ವಿಜಯಪುರ ಜಿಲ್ಲೆಗಳಲ್ಲಿ ಒಣ ಹವೆ ಇರಲಿದೆ ಎಂದು ಹವಮಾನ ಇಲಾಖೆ ಸೂಚನೆ ನೀಡಿದೆ.
ನವೆಂಬರ್, ಡಿಸೆಂಬರ್ ನಲ್ಲಿ ಸಹಜವಾಗಿಯೇ ಚಳಿ ಶುರುವಾಗಲಿದೆ. ಈ ಬಾರಿ ನವೆಂಬರ್ ಕೊನೆ ವಾರದಲ್ಲಿ ಚಳಿ ಶುರುವಾಗಿದ್ದು ಮುಂದುವರೆಯಲಿದೆ. ಇನ್ನು ಸಂಕ್ರಾಂತಿಯ ವರೆಗೂ ಚಳಿ ಹೇಗೆ ಸಹಿಸುವುದು. ಶಿವರಾತ್ರಿ ತನಕ ಈ ಚಳಿಯನ್ನ ತಡೆದುಕೊಳ್ಳುವುದಕ್ಕೆ ಸಾಧ್ಯವಾಗುತ್ತಾ ಎಂಬ ಆತಂಕ ಎಲ್ಲರಲ್ಲೂ ಮನೆ ಮಾಡಿದೆ.






