ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ನವೆಂಬರ್. 26 : ಸಂಚಾರಿ ನಿಯಮ ಉಲ್ಲಂಘಿಸುವವರಿಗೆ ರಾಜ್ಯ ಸರ್ಕಾರ ದುಬಾರಿ ದಂಡಗಳನ್ನು ವಿಧಿಸುತ್ತಿರುವುದನ್ನು ಕಡಿಮೆಗೊಳಿಸುವಂತೆ ಕರುನಾಡ ಜನಜಾಗೃತಿ ಹಿತರಕ್ಷಣಾ ವೇದಿಕೆಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಡಳಿತದ ಮೂಲಕ ರಾಜ್ಯದ ಗೃಹಮಂತ್ರಿ ಡಾ.ಪರಮೇಶ್ವರ್ರವರಿಗೆ ಮನವಿ ಸಲ್ಲಿಸಲಾಯಿತು.
ದುಬಾರಿ ದಂಡಗಳನ್ನು ವಿಧಿಸುತ್ತಿರುವುದು ಬಡ ಹಾಗೂ ಮಧ್ಯಮ ವರ್ಗದವರಿಗೆ ಮರಣ ಶಾಸನವಾಗಿದೆ. 2025 ರ ಪರಿಷ್ಕರಿಸಿದ ಹೊಸ ದಂಡಗಳು ಹತ್ತುಪಟ್ಟು ಜಾಸ್ತಿಯಾಗಿದೆ. ದುಬಾರಿ ದಂಡಗಳನ್ನು ಕಟ್ಟಲಾಗದೆ ಚಾಲಕರುಗಳು ಪರಿತಪಿಸುವಂತಾಗಿದೆ. ಸಂಚಾರಿ ಠಾಣೆಯ ಪೊಲೀಸರು ಮೇಲಾಧಿಕಾರಿಗಳ ಸೂಚನೆಯಂತೆ ದಿನಕ್ಕೆ ಇಂತಿಷ್ಟು ದಂಡ ವಸೂಲಿ ಮಾಡಬೇಕು. ಮಂಡ್ಯ ಜಿಲ್ಲೆ ಟ್ರಾಫಿಕ್ ಪೊಲೀಸರ ಎಡವಟ್ಟಿನಿಂದ ಮೂರು ವರ್ಷದ ಹೆಣ್ಣು ಮಗು ಪ್ರಾಣ ಕಳೆದುಕೊಳ್ಳಬೇಕಾಯಿತು.
ಸಂಚಾರಿ ನಿಯಮ ಉಲ್ಲಂಘಿಸಿದವರಿಗೆ ಸ್ಥಳದಲ್ಲಿಯೇ ದಂಡ ಕಟ್ಟುವಂತೆ ಒತ್ತಾಯಿಸುವುದಲ್ಲದೆ ವಾಹನ ಜಫ್ತಿ ಮಾಡುವುದು ನಿಲ್ಲಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಕರುನಾಡ ಜಾಗೃತಿ ಹಿತರಕ್ಷಣಾ ವೇದಿಕೆ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರಭಾಕರ್ ಜಿ.ಆರ್. ರಾಜ್ಯ ಯುವ ಘಟಕದ ಅಧ್ಯಕ್ಷ ಹೆಗ್ಗೆರೆ ರಂಗಪ್ಪ, ಜಿಲ್ಲಾಧ್ಯಕ್ಷ ಮಹಂತೇಶ್ ದಲಿತ ಮುಖಂಡರುಗಳಾದ ವಿಶ್ವನಾರಾಯಣಮೂರ್ತಿ, ಗುರುಮೂರ್ತಿ, ಅಣ್ಣಪ್ಪ, ಶಿವಕುಮಾರ್, ಎಲ್.ಜಯಣ್ಣ, ಸಿದ್ದೇಶ್ ಇನ್ನು ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.






