ಕಲಬುರಗಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವೋಟ್ ಚೋರಿ ಬಗ್ಗೆ ಬೃಹತ್ ಹೋರಾಟವನ್ನೇ ಮಾಡಿದ್ರು. ಅದಕ್ಕೆ ರಾಜ್ಯ ಕಾಂಗ್ರೆಸ್ ನಾಯಕರು ಬೆಂಬಲ ನೀಡಿದ್ದರು. ಇದೀಗ ಆಳಂದ ಕ್ಷೇತ್ರದಲ್ಲಿ ಮತ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಟ್ವಿಸ್ಟ್ ಸಿಕ್ಕಿದೆ. ಎಸ್ಐಟಿ ಈ ಸಂಬಂಧ ತನಿಖೆ ನಡೆಸುತ್ತಿದ್ದು, ಪಕ್ಕಾ ಪ್ಲ್ಯಾನ್ ಮಾಡಿ ಗೋಲ್ಮಾಲ್ ಆಗಿರುವುದು ಕಂಡು ಬಂದಿದೆ.
ವಿಚಾರಣೆಯಲ್ಲಿ ಬೆಳಕಿಗೆ ಬಂದಂತೆ, ಈ ಗ್ಯಾಂಗ್ 100ಕ್ಕೂ ಸಿಮ್ ಗಳನ್ನ ಖರೀದಿ ಮಾಡಿತ್ತಂತೆ. ಜೊತೆಗೆ ಕೋಳಿ ಫಾರಂ ಕೆಲಸಗಾರರ ಸಿಮ್ ಗಳನ್ನು ದುರ್ಬಳಕೆ ಮಾಡಿಕೊಂಡಿತ್ತಂತೆ. ಆಳಂದ ಸುತ್ತ ಮುತ್ತಬಕೋಳಿ ಫಾರಂನಲ್ಲಿ ಕೆಲಸ ಮಾಡುತ್ತಿದ್ದವರ ಸಿಮ್ ಗಳನ್ನ ದುರ್ಬಳಕೆ ಮಾಡಿಕೊಂಡಿದ್ದಾರೆ. ಎಸ್ಐಟಿ ಸದ್ಯ ತನಿಖೆಯನ್ನ ಚುರುಕುಗೊಳಿಸಿದ್ದು, ಸುಟ್ಟು ಹೋಗಿರುವ ವೋಟರ್ ಐಡಿಗಳನ್ನೆಲ್ಲಾ ಕಲೆಕ್ಟ್ ಮಾಡಿಕೊಂಡಿದೆ. ಎಲ್ಲದರ ಬಗ್ಗೆಯೂ ವಿಚಾರಣೆಗೆ ಮುಂದಾಗಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, ಈಗ ಈ ಬಗ್ಗೆ ಮಾಹಿತಿ ಬರ್ತಾ ಇದೆ. ಪ್ರತಿಯೊಂದು ವೋಟಿಗೂ ಕೂಡ 80 ರೂಪಾಯಿಯನ್ನು ನೀಡಿ ಡಿಲೀಟ್ ಮಾಡಿದ್ದಾರಂತೆ. ರಾಹುಲ್ ಗಾಂಧಿ ಅವರು ಹೇಳಿದಾಗ ಬಹಳಷ್ಟು ಟೀಕೆಗಳು ಬಂತು. ಈಗ ಒಂದೊಂದಾಗಿ ದಾಖಲೆ ಸಮೇತ ಹೊರಗೆ ಬರ್ತಾ ಇದೆ. ಇನ್ನು ಸಾಕ್ಷಿಗಳು ಸಿಕ್ತಾ ಇದಾವೆ. ಬಿಜೆಪಿಯವರಿಗೆ ನನ್ನ ಪ್ರಶ್ನೆ, ಪ್ರಜಾಪ್ರಭುತ್ವವನ್ನ ಮಾರಾಟಕ್ಕೆ ಇಟ್ಟಿದ್ದಾರಾ ಅಂತ. ಬೇರೆ ಬೇರೆ ರಾಜ್ಯದಲ್ಲೂ ಇದೇ ರೀತಿ ಮತಗಳ್ಳತನ ನಡೆದಿದೆ. ಅದೆನ್ನೆಲ್ಲಾ ಸಾಕ್ಷಿ ಸಮೇತ ಪ್ರೂವ್ ಮಾಡುತ್ತೇವೆ ಎಂದು ಭರವಸೆ ನೀಡಿದ್ದಾರೆ.

