ಸುದ್ದಿಒನ್, ಚಿತ್ರದುರ್ಗ, ಆಗಸ್ಟ್. 07 : ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ನಗರದ ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠದಲ್ಲಿ ಇದೇ ಆಗಸ್ಟ್ 10 ರಿಂದ 12 ನೇ ತಾರೀಖಿನವರೆಗೆ ಮೂರು ದಿನಗಳ ಕಾಲ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ 354 ನೇ ವರ್ಷದ ಆರಾಧನಾ ಪಂಚರಾತ್ರೋತ್ಸವ ನಡೆಯಲಿವೆ.
ರಾಘವೇಂದ್ರ ಸ್ವಾಮಿಗಳು ಸಶರೀರ ಬೃಂದಾವನಸ್ಥರಾದ ದಿನವನ್ನು ಪ್ರತಿ ವರ್ಷ ಆರಾಧನೆಯನ್ನಾಗಿ ಆಚರಿಸಲಾಗುತ್ತದೆ. 1671 ರಲ್ಲಿ ಶ್ರಾವಣ ಕೃಷ್ಣ ಪಕ್ಷದ ದ್ವಿತೀಯ ದಿನದಂದು ರಾಘವೇಂದ್ರ ಸ್ವಾಮಿಗಳು ಸಶರೀರ ಬೃಂದಾವನಸ್ಥರಾದರು. ಅಂದಿನಿಂದ ಪ್ರತಿ ವರ್ಷ ಆ ದಿನವನ್ನು ರಾಘವೇಂದ್ರ ಸ್ವಾಮಿಗಳ ಆರಾಧನೆಯನ್ನಾಗಿ ಆಚರಿಸಲಾಗುತ್ತಿದೆ. ಈ ಬಾರಿ ಕೂಡಾ ಮೂಲ ಬೃಂದಾವನವಿರುವ ಮಂತ್ರಾಲಯ, ಚಿತ್ರದುರ್ಗ ಸೇರಿದಂತೆ ಎಲ್ಲಾ ರಾಯರ ಮಠದಲ್ಲಿ ಈ ಆರಾಧನೆಯನ್ನು ಶ್ರದ್ಧಾ ಭಕ್ತಿಗಳಿಂದ ಆಚರಿಸಲಾಗುತ್ತಿದೆ.
ಕಾರ್ಯಕ್ರಮಗಳ ವಿವರ :
ಆಗಸ್ಟ್ 10 ರ ಭಾನುವಾರ ಶ್ರೀ ಗುರುಸಾರ್ವಭೌಮರ ಪೂರ್ವಾರಾಧನೆ, ಆಗಸ್ಟ್ 11 ರ ಸೋಮವಾರ, ಮಧ್ಯಾರಾಧನೆ,ಆಗಸ್ಟ್ 12 ರ ಮಂಗಳವಾರ, ಉತ್ತರಾರಾಧನೆ ಪ್ರಯುಕ್ತ ಅಂದು ಬೆಳಿಗ್ಗೆ 10.00 ಗಂಟೆಗೆ
ಮಹಾರಥೋತ್ಸವವು ನಗರದ ರಾಜಬೀದಿಗಳಲ್ಲಿ ವಿವಿಧ ಭಜನಾಮಂಡಳಿಗಳು ಹಾಗೂ ಶ್ರೀ ಗುರುಸಾರ್ವಭೌಮರ ಭಕ್ತರೊಂದಿಗೆ ಜರುಗುವುದು. ಆಗಸ್ಟ್ 13 ರ ಬುಧವಾರ
ಶ್ರೀ ಸುಜ್ಞಾನೇಂದ್ರತೀರ್ಥರ ಆರಾಧನೆ, ಪವಮಾನ ಹೋಮ, ಸರ್ವಸಮರ್ಪಣೋತ್ಸವ ನಡೆಯಲಿದೆ.
ಈ ಮೂರು ದಿವಸಗಳ ಕಾಲ ಭಕ್ತರು ಶ್ರೀಮಠಕ್ಕೆ ಆಗಮಿಸಿ ಶ್ರೀ ಗುರುರಾಜರ ದರ್ಶನ, ಸೇವಾ ಸೌಭಾಗ್ಯವನ್ನು ಪಡೆದು ತನು, ಮನ, ಧನಗಳಿಂದ ಆರಾಧನಾ ಮಹೋತ್ಸವದಲ್ಲಿ ಭಾಗವಹಿಸಿ ಶ್ರೀ ಗುರುರಾಜರ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಶ್ರೀ ಮಠದ ಆಡಳಿತ ಮಂಡಳಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.






