ಚಿತ್ರದುರ್ಗ, (ನ.10): ನಾಡಗೀತೆಗಳನ್ನು ರಚಿಸಿದ ಕವಿವರೇಣ್ಯರು ನಾಡಪ್ರೇಮವನ್ನು ಹರಿಸಿದ್ದಾರೆ. ಪ್ರತಿಯೊಂದೂ ಪದಗಳ ವಿಸ್ತಾರವನ್ನು ಅನುಸರಿಸಿದರೆ ಮಾತ್ರ ನಮ್ಮಲ್ಲಿ ಒಗ್ಗಟ್ಟಿನ ಭಾವ ಮೂಡುತ್ತದೆ. ಜಾತಿಮತ ಪಂಥಗಳನ್ನು ತೊರೆದು ನಾವೆಲ್ಲಾ ಒಂದು ಎಂಬ ಭಾವನೆ ಮೂಡಿದರೆ ಮಾತ್ರ ಉಜ್ವಲ ಭವಿಷ್ಯ ನಮ್ಮದಾಗುತ್ತದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಸ್.ಕೆ.ಮಲ್ಲಿಕಾರ್ಜುನ್ ತಿಳಿಸಿದರು.
ರಂಗಸೌರಭ ಕಲಾ ಸಂಘ ಮತ್ತು ಕನ್ನಡ ಮತ್ತು ಸಂಸ್ಕøತಿ ನಿರ್ದೇಶನಾಲಯ ಬೆಂಗಳೂರು ಸಂಯುಕ್ತ ಆಶ್ರಯದಲ್ಲಿ ಬಿ.ದುರ್ಗ ಗ್ರಾಮದ ಕಾಶೀಮಹಾಲಿಂಗಸ್ವಾಮಿ ಪ್ರೌಢಶಾಲೆ ಆವರಣದಲ್ಲಿ 67ನೇ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಏರ್ಪಡಿಸಿದ್ದ ರಾಷ್ಟ್ರೀಯ ಭಾವೈಕ್ಯತಾ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಂಪನ್ಮೂಲ ವ್ಯಕ್ತಿಗಳು ಮಕ್ಕಳಿಗೆ ಪಠ್ಯಾಧಾರಿತ ವಿಷಯಕ್ಕೆ ಅನುಗುಣವಾಗಿ ತರಬೇತಿ ನೀಡಬೇಕು. ದಾರ್ಶನಿಕರ ಸಂತರ ಜೀವನ ಚರಿತ್ರೆಗಳ ಮಹತ್ವವನ್ನು ತಿಳಿಸಬೇಕು. ನಡೆನುಡಿ ಶುದ್ಧವಾದಲ್ಲಿ ಉತ್ತಮ ಜೀವನ ಮೌಲ್ಯಗಳ ಅರಿವು ಉಂಟಾಗುತ್ತದೆ ಎಂದರು.
ಹಿರಿಯ ರಂಗಭೂಮಿ ಕಲಾವಿದ ಹಾಗೂ ಗ್ರಾ.ಪಂ ಸದಸ್ಯ ಎಸ್.ಡಿ.ರಾಮಸ್ವಾಮಿ ಮಾತನಾಡಿ ಮಕ್ಕಳಿಗೆ ಬಾಲ್ಯದಿಂದಲೇ ಕನ್ನಡನಾಡು ನುಡಿಯ ಬಗ್ಗೆ ಅಭಿಮಾನ ಮೂಡಿಸುವಂತಹ ಕೆಲಸವಾಗಬೇಕು. ನಾಡಗೀತೆ, ರೈತಗೀತೆಗಳಲ್ಲಿರುವ ಸಾರವನ್ನು ಮನದಟ್ಟು ಮಾಡಿಕೊಟ್ಟು ಅದರಲ್ಲಿರುವ ಆಶೋತ್ತರಗಳನ್ನು ತಿಳಿಯುವಂತೆ ಮಾಡಿದರೆ ಬಾಲ್ಯದಲ್ಲೇ ಅವರಿಗೆ ನಾಡು ಹಾಗೂ ರೈತರ ಬಗ್ಗೆ ಗೌರವ ಮೂಡುತ್ತದೆ. ರಾಷ್ಟ್ರಸ್ತವ, ರಾಷ್ಟ್ರಗೀತೆಗಳನ್ನು ಜನರಿಗೆ ಹಾಗೂ ವಿದ್ಯಾರ್ಥಿಗಳಿಗೆ ರಂಗಭೂಮಿಯ ಮೂಲಕ ತಲುಪಿಸುವ ಕೆಲಸವನ್ನು ರಂಗಸೌರಭ ಕಲಾ ಸಂಘವು ಮಾಡುತ್ತಿದೆ ಎಂದರು.
ಮುಖ್ಯಶಿಕ್ಷಕಿ ಎಸ್.ವಿ.ಮಂಜುಳ ಅಧ್ಯಕ್ಷತೆ ವಹಿಸಿದ್ದರು. ಹೋಬಳಿ ಕಸಾಪ ಅಧ್ಯಕ್ಷ ಹಾಗೂ ಮಾಜಿ ಸೈನಿಕ ಬಿ.ಎಂ.ನಾಗರಾಜ್, ಬಾದರದಿನ್ನಿ ಆಟ್ರ್ಸ್ ಅಕಾಡೆಮಿ ಕಾರ್ಯದರ್ಶಿ ಪ್ರಕಾಶ್ ಬಾದರದಿನ್ನಿ ಮುಖ್ಯಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿದರು.
ಇದೇ ಸಂದರ್ಭದಲ್ಲಿ ರಂಗನಿರ್ದೇಶಕ ಕೆಪಿಎಂ.ಗಣೇಶಯ್ಯ ರಾಷ್ಟ್ರೀಯ ಭಾವೈಕ್ಯತಾ ಕಾರ್ಯಾಗಾರದಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿ ಭಾರತೀಯರಿಗೆ ರಾಷ್ಟ್ರಾಭಿಮಾನದ ಕಿಚ್ಚನ್ನು ಮೂಡಿಸಿದ ಬಂಕಿಮಚಂದ್ರ ಚಟರ್ಜಿ ವಿರಚಿತ ರಾಷ್ಟ್ರಸ್ತವ, ರಾಷ್ಟ್ರಕವಿ ರವೀಂದ್ರನಾಥ ಠ್ಯಾಗೋರರ ರಾಷ್ಟ್ರಗೀತೆ, ಕರ್ನಾಟಕ ವೈಭವ ಸಾರುವ ರಾಷ್ಟ್ರಕವಿ ಕುವೆಂಪು ರಚಿಸಿದ ನಾಡಗೀತೆ, ದೇಶದ ಬೆನ್ನೆಲುಬು ಎಂದೇ ಕರೆಯಲ್ಪಡುವ ರೈತಗೀತೆ ಮುಂತಾದ ಗೀತೆಗಳನ್ನು ಧ್ವನಿಮುದ್ರಿಕೆಗಳ ಸಂಗೀತ ಸಂಯೋಜನೆಯಲ್ಲಿ ರಾಗಬದ್ಧವಾಗಿ ತರಬೇತಿ ನೀಡಿದರು.
ಹಿರಿಯ ಕನ್ನಡ ಪ್ರಾಧ್ಯಾಪಕಿ ಎಸ್.ಭಾಗ್ಯಲಕ್ಷ್ಮಿ ಪ್ರಾಸ್ತಾವಿಕ ನುಡಿದರು. ಸಹಶಿಕ್ಷಕರಾದ ಎಸ್.ಸಿ.ಮರುಳಸಿದ್ದಯ್ಯ, ಬಿ.ಎಸ್.ಶೋಭಾ, ಜಿ.ಇ.ಶೈಲಾ, ಎ.ಎಲ್.ಗುಡ್ಡದ್ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಅಕ್ಷತಾ ಮತ್ತು ಲಕ್ಷ್ಮಿ ಪ್ರಾರ್ಥಿಸಿದರು. ಹೆಚ್.ಜಿ.ಸುಚಿತ್ರ ನಿರೂಪಿಸಿದರು.