Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಹಿರಿಯರ ಆಶಯ ಈಡೇರಲಿ, ದುರ್ಗದ ಜನರ ಬದುಕಲ್ಲಿ ಕತ್ತಲು ಸರಿದು ಬೆಳಕು ಮೂಡಲಿ

Facebook
Twitter
Telegram
WhatsApp

ಚಿತ್ರದುರ್ಗ : ನೀರಾವರಿ, ಕೈಗಾರಿಕೆ, ಶಿಕ್ಷಣ, ಉದ್ಯೋಗ ಕ್ಷೇತ್ರದಲ್ಲಿ ಅತ್ಯಂತ ಹಿಂದುಳಿದಿರುವ ಜಿಲ್ಲೆ ಚಿತ್ರದುರ್ಗ, ಇದೇ ಕಾರಣಕ್ಕೆ ನಮ್ಮ ಜಿಲ್ಲೆಯವರೇ ಆದ ಹೊಳಲ್ಕೆರೆ ತಾಲೂಕು ದೊಗ್ಗನಾಳ್ ಗ್ರಾಮದ ಡಾ.ಡಿ.ಎಂ.ನಂಜುಂಡಪ್ಪ ತಮ್ಮ ವರದಿಯಲ್ಲಿ ಜಿಲ್ಲೆ ಅತ್ಯಂತ ಹಿಂದುಳಿದ ಪ್ರದೇಶವೆಂದು ಗುರುತಿಸಿದ್ದು, ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ನೂರಾರು ಸಲಹೆ, ಸೂಚನೆಗಳನ್ನು ದಾಖಲಿಸಿದ್ದಾರೆ.

ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳು ನಂಜುಂಡಪ್ಪ ವರದಿಯನ್ನು ಯಥಾವತ್ತಾಗಿ ಅನುಷ್ಠಾನಗೊಳಿಸಿದರೆ ಜಿಲ್ಲೆ ಜನರ ಬದುಕಿನಲ್ಲಿ ಬೆಳಕು ಮೂಡುವುದು ಖಚಿತ.

ಈ ದೀಪಾವಳಿ ಹಬ್ಬದ ಆಚರಣೆಯೊಂದಿಗೆ ಜಿಲ್ಲೆಗೆ ಅಗತ್ಯವಾಗಿ ಬೇಕಾಗಿರುವ ಸರ್ಕಾರಿ ಮೆಡಿಕಲ್ ಕಾಲೇಜ್, ಕುಂಟುತ್ತ ಸಾಗುತ್ತಿರುವ ಭದ್ರಾ ಮೇಲ್ದಂಡೆ ಯೋಜನೆ, ದಾಖಲೆಗಳಲ್ಲಿಯೇ ಓಡಾಡುತ್ತಿರುವ ನೇರ ರೈಲು ಮಾರ್ಗ, ಕೈಗಾರಿಕೆಗಳ ಸ್ಥಾಪನೆ ಸೇರಿದಂತೆ ನಂಜುಂಡಪ್ಪ ವರದಿಯಲ್ಲಿ ಸೂಚಿಸಿರುವಂತೆ ಯೋಜನೆಗಳ ಅನುಷ್ಠಾನದತ್ತ ಆಳುವ ವರ್ಗ ಇಚ್ಛಾಶಕ್ತಿ ಪ್ರದರ್ಶಿಸಿ, ದುರ್ಗದ ಜನರ ಬದುಕಲ್ಲಿ ಬೆಳಕು ಮೂಡಿಸುವ ಮೂಲಕ ಜಿಲ್ಲೆಯ ಹಿರಿಯ ಜೀವಿಗಳ ಕನಸು ನನಸು ಮಾಡಬೇಕಿದೆ.

ಜಿಲ್ಲೆ ಆರ್ಥಿಕವಾಗಿ ಹಿಂದುಳಿದಿದೆ. ಆದರೆ, ಸಂಸ್ಕೃತಿ, ಧಾರ್ಮಿಕ, ಹೋರಾಟ, ಐತಿಹಾಸಿಕ, ಸಾಂಸ್ಕೃತಿಕವಾಗಿ ಅತ್ಯಂತ ಶ್ರೀಮಂತ ಜಿಲ್ಲೆ ಆಗಿದೆ.
ರಾಷ್ಟ್ರಕವಿ ಕುವೆಂಪು ಅಂತಹ ಶಿಷ್ಯರನ್ನು ನಾಡಿಗೆ ಕೊಡುಗೆ ನೀಡಿದ ಗುರು ತ.ಸು.ವೆಂಕಣ್ಣಯ್ಯ ಅವರು ತಳಕು ಗ್ರಾಮದವರು ಎಂಬುದು ಜಿಲ್ಲೆಯ ಮಟ್ಟಿಗೆ ದೊಡ್ಡ ಹೆಮ್ಮೆ. ಇನ್ನೂ ಬೆಳಗೆರೆ-ತಳಕು ಕುಟುಂಬಗಳು ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರ. ಜನಪದ ಕೋಶದ ಕಣಜ ಸಿರಿಯಜ್ಜಿ, ಭೋವಿ ಜಯಮ್ಮರಂತಹ ನೂರಾರು ಅನಕ್ಷರಸ್ಥರ ಸೇವೆ ಗಮನಾರ್ಹ.

ಜಗಳೂರು ಇಮಾಂ ಸಾಬ್, ಎಸ್.ನಿಜಲಿಂಗಪ್ಪ, ದುಗ್ಗಪ್ಪ, ಹೋ.ಚಿ.ಬೋರಯ್ಯ, ಭೀಮಪ್ಪನಾಯಕ, ಮುಲ್ಕಾ ಗೋವಿಂದರೆಡ್ಡಿಯಂತಹ ನೂರಾರು ದಿಗ್ಗಜರ ಸ್ವಚ್ಛ ರಾಜಕಾರಣ ನಾಡಿಗೆ ಮಾದರಿ ಆಗಿದೆ.
ಸಾಹಿತಿ ಬಿ.ಎಲ್.ವೇಣು, ಇತಿಹಾಸ ಸಂಶೋಧಕರಾದ ಲಕ್ಷ್ಮಣ್ ತೆಲಗಾವಿ, ಡಾ.ಬಿ.ರಾಜಶೇಖರಪ್ಪ, ಶ್ರೀಶೈಲ ಆರಾಧ್ಯ, ಹೀಗೆ ಸಾಲು ಸಾಲು ಖ್ಯಾತನಾಮರು ತಮ್ಮ ಬರವಣಿಗೆ ಮೂಲಕ ಇಡೀ ರಾಜ್ಯಕ್ಕೆ ಕೊಡುಗೆ ನೀಡುತ್ತಲೇ ಇದ್ದಾರೆ.

ಈ ಸಾಲಿಗೆ ಸಾಹಿತ್ಯ ಪರಿಚಾರಕ ಎಂದೇ ಜಿಲ್ಲೆಯ ಜನರ ಪ್ರೀತಿ ಗಳಿಸಿರುವ ಕೆ.ವೆಂಕಣ್ಣಾಚಾರ್ ಸೇರುತ್ತಾರೆ. ಕೃತಿಗಳನ್ನು ಸ್ವತಃ ಹೊರತಂದಿದ್ದಕ್ಕಿಂತ ಮತ್ತೊಬ್ಬರ ಸಾಹಿತ್ಯ ಕೃಷಿಗೆ ಬೃಹತ್ ನೀರಾವರಿ ಯೋಜನೆ ರೀತಿ ಕೆಲಸ ಮಾಡಿದ ಕೀರ್ತಿ ವೆಂಕಣ್ಣಾಚಾರ್ ಅವರಿಗೆ ಸಲ್ಲುತ್ತದೆ.

ದಶದ ಹಿಂದೆ ಯಾವುದೇ ಸಮಾರಂಭವಿರಲಿ, ಅಲ್ಲಿ ವೆಂಕಣ್ಣಾಚಾರ್ ಉಪಸ್ಥಿತಿ ಕಡ್ಡಾಯ ಇರುತ್ತಿತ್ತು. ಅವರಿಲ್ಲದಿದ್ದರೆ ಕಾರ್ಯಕ್ರಮ ಅಪೂರ್ಣ. ತಮ್ಮ ಇಳಿವಯಸ್ಸಿನಲ್ಲೂ ವೆಂಕಣ್ಣಾಚಾರ್ ಬಹಳಷ್ಟು ಬರಹಗಾರರ, ಕಾರ್ಯಕ್ರಮಗಳ ಸಂಘಟಕರ ಮಾರ್ಗದರ್ಶಕರಾಗಿ ಈಗಲೂ ಕೆಲಸ ಮಾಡುತ್ತಿದ್ದಾರೆ.
ವೆಂಕಣ್ಣಾಚಾರ್ ಅವರ ಮಾತನ್ನು ಒಂದು ಗಂಟೆ ಕೇಳಿದರೆ ಹತ್ತಾರು ಕೃತಿಗಳನ್ನು ಓದಿದಷ್ಟು ಜ್ಞಾನಾರ್ಜನೆ, ಜಿಲ್ಲೆಯನ್ನೇ ಒಂದು ಸುತ್ತು ಹಾಕಿದಷ್ಟು ಅನುಭವ ಆಗಲಿದೆ. ಅಗಾಧ ನೆನಪಿನ ಶಕ್ತಿ ಜತೆಗೆ, ಜಿಲ್ಲೆಯ ಐತಿಹಾಸಿಕ ಸ್ಥಳಗಳು, ದುರ್ಗವನ್ನಾಳಿದವರು, ಸಾಹಿತ್ಯ ದಿಗ್ಗಜರು, ದುರ್ಗದಲ್ಲಿ ಆಡಳಿತ ನಡೆಸಿದ ದಕ್ಷ ಅಧಿಕಾರಿಗಳು, ಅಷ್ಟೇಕೆ ಎಲೆಮರೆ ಕಾಯಿಯಂತೆ ಸಾಂಸ್ಕೃತಿಕ ಲೋಕಕ್ಕೆ ಕೊಡುಗೆ ನೀಡಿದವರ ಪರಿಚಯ ವೆಂಕಣ್ಣಾಚಾರ್ ಅವರೊಬ್ಬರ ಭೇಟಿ ಮೂಲಕ ಲಭಿಸಲಿದೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕರಾಗಿದ್ದ ವೇಳೆ ಬಹಳಷ್ಟು ಎಲೆಮರೆ ಕಾಯಿಯಂತ ಕಲಾವಿದರನ್ನು ಗುರುತಿಸಿ ಮುಖ್ಯವಾಹಿನಿಗೆ ತರುವ ಮಹತ್ ಕಾರ್ಯವನ್ನು ಮಾಡಿದ ವೆಂಕಣ್ಣಾಚಾರ್ ಅವರ ಕಾರ್ಯ ಮಾದರಿ ಆಗಿದೆ. ನಿವೃತ್ತಿ ನಂತರವೂ ತಮ್ಮನ್ನು ಸಂಪೂರ್ಣವಾಗಿ ಸಾಹಿತ್ಯ, ಸಾಂಸ್ಕೃತಿ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದ್ದ ವೆಂಕಣ್ಣಾಚಾರ್ ಎಂದರೆ ಕಾರ್ಯಕ್ರಮಗಳ ಸಂಘಟಕರು, ಅಧಿಕಾರಿಗಳು, ರಾಜಕಾರಣಿಗಳು, ಮಠಾಧೀಶರಿಗೆ ಎಲ್ಲಿಲ್ಲದ ಪ್ರೀತಿ.

ಹೆಗಲಿಗೊಂದು ಬ್ಯಾಗ್ ಹಾಕಿಕೊಂಡು ಜಾತಿ, ಧರ್ಮ ಭೇದ ಇಲ್ಲದೆ ಸಾಹಿತಿಗಳ ಸೇವಾ ಕಾರ್ಯಕ್ಕೆ ತಮ್ಮನ್ನು ಸಂಪೂರ್ಣ ತೊಡಗಿಸಿಕೊಂಡಿರುವ ಕೆ.ವೆಂಕಣ್ಣಾಚಾರ್ ಅವರು, ಚಿತ್ರದುರ್ಗ ಜಿಲ್ಲೆಯ ನಿಜ ಸಂಪತ್ತು ಎಂದರೆ ಅತಿಶಯೋಕ್ತಿಯಲ್ಲ. ನನ್ನಂತಹ ಹಲವು ಮಂದಿ ಅವರನ್ನು ಭೇಟಿ ಮಾಡಿ ಮಾಹಿತಿ ಕೇಳಿದರೆ ಕ್ಷಣಾರ್ಧದಲ್ಲಿಯೇ ದಾಖಲೆ ಸಮೇತ ತಿಳಿಸಿಕೊಡುವ ಉತ್ಸಾಹ ಯುವ ಪೀಳಿಗೆಗೆ ಮಾದರಿ ಆಗಿದೆ. ಜತೆಗೆ ನಮ್ಮ ವೃತ್ತಿಯಲ್ಲಿ ಸಾಧನೆ ಮಾಡುವಂತೆ ಹುರಿದುಂಬಿಸುತ್ತಾರೆ.

ಬೆಳಕಿನ ಹಬ್ಬದ ವಿಶೇಷ ಸಂದರ್ಭದಲ್ಲಿ ಸುದ್ದಿಒನ್ ವಿಶೇಷ ಸಂಚಿಕೆಯಲ್ಲಿ ಜಿಲ್ಲೆಯ ದಿಗ್ಗಜ, ಸಜ್ಜನರನ್ನು ನೆನಪು ಮಾಡಿಕೊಳ್ಳುವ ಈ ಸಣ್ಣ ಪ್ರಯತ್ನ ನಮ್ಮದಾಗಿದೆ. ಓದುಗರಿಗೆ ಇದು ಇಷ್ಟವಾಗಲಿದೆ ಎಂಬುದು ನಮ್ಮ ನಂಬಿಕೆ. ಎಂದಿನಂತೆ ತಪ್ಪುಗಳನ್ನು ತಿಳಿಸಿ, ತಿದ್ದುವ ಜತೆಗೆ ಸಲಹೆ-ಸೂಚನೆ ನೀಡುವ ಅಧಿಕಾರ ಓದುಗರದ್ದೇ ಆಗಿರುತ್ತದೆ.
ಎರಡು ವರ್ಷ ಜಗತ್ತನ್ನೇ ಕಾಡಿದ ಕರೋನಾ ಸೋಂಕು ದೂರವಾಗಲಿ, ಜನರ ಬದುಕಿನಲ್ಲಿ ಹೊಸ ಬೆಳಕೊಂದು ಮೂಡಲಿ. ಈ ದೀಪಾವಳಿ ಎಲ್ಲರಿಗೂ ಶುಭ ತರಲಿ.

ಪಿ.ಎಲ್. ನಾಗೇಂದ್ರ ರೆಡ್ಡಿ
ಪ್ರಧಾನ ಸಂಪಾದಕ, ಸುದ್ದಿಒನ್

Facebook
Twitter
Telegram
WhatsApp
suddionenews

suddionenews

Leave a Comment

Top Stories

ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಬಿರುಸಿನ ಮತದಾನ : ಮತದಾರರಿಂದ ಉತ್ತಮ ಸ್ಪಂದನೆ : ಯಾವ ಕ್ಷೇತ್ರದಲ್ಲಿ ಎಷ್ಟು ಮತದಾನವಾಗಿದೆ ?

  ಚಿತ್ರದುರ್ಗ .26: ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಬಿರುಸಿನ ಮತದಾನ ದಾಖಲಾಗಿದೆ‌. ಬೆಳಗಿನ 11 ಗಂಟೆವರೆಗೆ ಶೇ 21.75 % ಮತದಾನ ದಾಖಲಾಗಿದೆ. ವಿಧಾನ ಸಭಾ ಕ್ಷೇತ್ರವಾರು ಚಳ್ಳಕೆರೆ- 22.55%, ಚಿತ್ರದುರ್ಗ-23.73%,ಹಿರಿಯೂರು-20.79% , ಹೊಳಲ್ಕೆರೆ

ಚಳ್ಳಕೆರೆಯಲ್ಲಿ ಮತದಾನ ಮಾಡಿದ ಶತಾಯುಷಿ

ವರದಿ ಮತ್ತು ಫೋಟೋ ಕೃಪೆ ಸುರೇಶ್ ಬೆಳಗೆರೆ ಮೊ : 97398 75729 ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್. 26 : ರಾಜ್ಯದಲ್ಲಿ ಇಂದು ಲೋಕಸಭಾ ಚುನಾವಣೆ  ಮತದಾನ ಪ್ರಕ್ರಿಯೆ ಭರದಿಂದ ಸಾಗುತ್ತಿದೆ. ಯುವಕ –

ಚಿತ್ರದುರ್ಗದಲ್ಲಿ‌ ಆರಂಭಗೊಂಡ ಮತದಾನ ಪ್ರಕ್ರಿಯೆ : ಬೆಳ್ಳಂಬೆಳಿಗ್ಗೆಯೇ ಸಾಲುಗಟ್ಟಿ ನಿಂತ ಮತದಾರರು

ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್. 26 : ದೇಶದಾದ್ಯಂತ ನಡೆಯುತ್ತಿರುವ ಲೋಕಸಭಾ ಚುನಾವಣೆಯ ಎರಡನೇ ಹಂತದ ಮತದಾನ ಇಂದು ಆರಂಭವಾಗಿದೆ. ರಾಜ್ಯದ 14 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭವಾಗಿದೆ. ಚಿತ್ರದುರ್ಗ ನಗರದ ವಿಪಿ ಬಡಾವಣೆಯ

error: Content is protected !!