ಸುದ್ದಿಒನ್, ಚಿತ್ರದುರ್ಗ, (ಜು.23): ತುರುವನೂರು ರಸ್ತೆ ಆರ್ಟಿಒ ಕಚೇರಿ ಹಿಂಭಾಗದ ಬಿ.ಎಲ್.ಗೌಡ ಲೇಔಟ್ ಬಡಾವಣೆ ನಿವಾಸಿ ಜಿ.ಎಸ್.ಜಯಲಕ್ಷ್ಮೀ (65) ಸೋಮವಾರ ಮುಂಜಾನೆ ನಿಧನರಾದರು.
ಪತಿ ಕುರುಬ ಸಂಘದ ತಾಲೂಕಾಧ್ಯಕ್ಷ, ಕೃಷಿ ಇಲಾಖೆ ನಿವೃತ್ತ ಅಧಿಕಾರಿ ಬಿ.ಜಗನ್ನಾಥ್, ಓರ್ವ ಪುತ್ರಿ, ಇಬ್ಬರು ಪುತ್ರರು ಸೇರಿದಂತೆ ಅಪಾರ ಕುಟುಂಬದವರನ್ನು ಅಗಲಿದ್ದಾರೆ. ಹಿರಿಯೂರು ತಾಲೂಕು ಹುಲಿತೊಟ್ಲು ಗ್ರಾಮದಲ್ಲಿ ಸೋಮವಾರ ಮಧ್ಯಾಹ್ನ ಅಂತ್ಯಕ್ರಿಯೆ ನೆರವೇರಿತು.

ಚಿತ್ರದುರ್ಗ ಎಪಿಎಂಸಿ ಆವರಣದಲ್ಲಿ ಪ್ರಥಮ ಬಾರಿಗೆ ದಲ್ಲಾಳಿ ಮಂಡಿ ತೆರೆದ ಖ್ಯಾತಿ ಹೊಂದಿದ್ದ ದಿ.ಗಿರಿಯಪ್ಪನವರ ಪುತ್ರಿ ಜಯಲಕ್ಷ್ಮೀ, ಅನೇಕ ಸಾಮಾಜಿಕ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು.
ಅಂತಿಮ ದರ್ಶನ: ನಗರದ ಬಿ.ಎಲ್.ಗೌಡ ಲೇಔಟ್ ಬಡಾವಣೆಯಲ್ಲಿನ ನಿವಾಸದಲ್ಲಿ ಬೆಳಗ್ಗೆ 11 ಗಂಟೆಯವರೆಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಕುರುಬ ಸಂಘದ ಜಿಲ್ಲಾಧ್ಯಕ್ಷ ಎಸ್.ಶ್ರೀರಾಮ್, ನಗರಸಭೆ ಮಾಜಿ ಅಧ್ಯಕ್ಷ ಎಚ್.ಮಂಜಪ್ಪ, ಡಿಸಿಸಿ ಬ್ಯಾಂಕ್ ನಿರ್ದೇಶಕ ನಿಶಾನಿ ಜಯಣ್ಣ, ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಬಿ.ಟಿ.ಜಗದೀಶ್, ಜಿಲ್ಲಾ ವಕೀಲ ಸಂಘದ ಪ್ರಧಾನ ಕಾರ್ಯದರ್ಶಿ ಆರ್.ಗಂಗಾಧರ್, ಸರ್ಕಾರಿ ನೌಕರ ಸಂಘದ ನಿರ್ದೇಶಕರಾದ ಕಲ್ಲೇಶ್ ಡಿ.ಮೌರ್ಯ, ಶಿಕ್ಷಕ ಕೆಂಚಪ್ಪ ಹಾಗೂ ರೋಟರಿ, ಇನ್ನರ್ವ್ಹೀಲ್ ಕ್ಲಬ್ ಸೇರಿ ವಿವಿಧ ಸಂಘಟನೆಗಳ ಪದಾಧಿಕಾರಿಗಳು, ನೂರಾರು ಗಣ್ಯರು ಭೇಟಿ ನೀಡಿ ಅಂತಿಮ ದರ್ಶನ ಪಡೆದರು.












