31 ಲಕ್ಷ ರೈತರಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

suddionenews
4 Min Read

ಚಿತ್ರದುರ್ಗ,(ಜೂ.04) : ರೈತ ಸಹಕಾರಿ ಸಂಘಗಳ ಮೂಲಕ ಕಳೆದ ವರ್ಷ 21 ಲಕ್ಷ ರೈತರಿಗೆ ಸಾಲ ನೀಡಲಾಗಿತ್ತು. ಈ ಬಾರಿ 31 ಲಕ್ಷ ರೈತರಿಗೆ ಶೂನ್ಯ ಬಡ್ಡಿಯಲ್ಲಿ ಸಾಲ‌ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಹೊಸದುರ್ಗ ತಾಲ್ಲೂಕಿನ ಇಂಡೇದೇವರಹಟ್ಟಿಯಲ್ಲಿ ಶನಿವಾರ ಆಯೋಜಿಸಿದ್ದ ‘ಹೊಸದುರ್ಗ ತಾಲ್ಲೂಕಿನ ವಾಣಿವಿಲಾಸ ಸಾಗರದ ಹಿನ್ನೀರಿನಲ್ಲಿ ಬೇವಿನಹಳ್ಳಿ ಗ್ರಾಮದಿಂದ ಹುಣಸೇಕಟ್ಟೆ ಗ್ರಾಮದವರೆಗೆ ಸೇತುವೆ ರಸ್ತೆ ನಿರ್ಮಾಣ ಕಾಮಗಾರಿ ಹಾಗೂ ಭದ್ರಾ ಮೇಲ್ದಂಡೆ ಯೋಜನೆಯ ಚಿತ್ರದುರ್ಗ ಶಾಖಾ ಕಾಲುವೆ ಮತ್ತು ತುಮಕೂರು ಶಾಖಾ ಕಾಲುವೆಯ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯಲ್ಲಿ ಬರುವ ತಾಲ್ಲೂಕಿನ ಕಸಬಾ, ಮಾಡದಕೆರೆ ಮತ್ತು ಶ್ರೀರಾಂಪುರ ಹೋಬಳಿಗಳ ವ್ಯಾಪ್ತಿಯಲ್ಲಿನ 36916 ಹೆ ಪ್ರದೇಶಕ್ಕೆ ಹನಿ ನೀರಾವರಿ ಒದಗಿಸುವುದು ಮತ್ತು 85 ಕೆರೆಗಳನ್ನು ತುಂಬಿಸು ವ ಕಾಮಗಾರಿ ಮತ್ತು ತಾಲ್ಲೂಕಿನ ವಿವಿಧ ಇಲಾಖೆಯ ಕಾಮಗಾರಿಗಳ ‘ಉದ್ಘಾಟನೆ ಶಂಕುಸ್ಥಾಪನೆ ಮತ್ತು ಸವಲತ್ತು ವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಸರ್ಕಾರ ರೈತ ಮಕ್ಕಳಿಗೆ ಅನುಕೂಲವಾಗಲಿ ಎಂದು ವಿದ್ಯಾನಿಧಿ ಯೋಜನೆ ಜಾರಿಗೆ ತಂದಿದೆ. 14 ಲಕ್ಷ ರೈತ ಮಕ್ಕಳಿಗೆ ವಿದ್ಯಾನಿಧಿ ಉಪಯೋಗ ದೊರಕಲಿದೆ. ಈ ಯೋಜನೆಗಾಗಿ ವಿದ್ಯಾರ್ಥಿಗಳು ಯಾವುದೇ ಅರ್ಜಿ ಹಾಕುವಂತಿಲ್ಲ, ನೇರ ಅವರ ಖಾತೆಗೆ ಹಣ ಜಮಾ ಆಗಲಿದೆ‌.

ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರ ಮನವಿಯಂತೆ ರೈತರು ಬಳಸುವ ಯಂತ್ರೋಪಕರಣಗಳಿಗೆ ಡೀಸಲ್ ಸಬ್ಸಿಡಿ ನೀಡಲು ಯೋಜನೆ ರೂಪಿಸಲಾಗಿದೆ. ಈ ಯೋಜನೆ ಅಂಗವಾಗಿ ವಾರ್ಷಿಕವಾಗಿ 1250 ರೂಪಾಯಿಗಳನ್ನು ರೈತರ ಖಾತೆಗೆ ಜಮೆ ಮಾಡಲಾಗುವುದು. ಇದಕ್ಕಾಗಿ 600 ಕೋಟಿ ರೂಪಾಯ ಮಂಜೂರು ಮಾಡಲಾಗಿದೆ. ಸದಾ ರೈತರ ಬಗ್ಗೆ ಕಾಳಜಿ ಇರುವ ಸರ್ಕಾರ ನಮ್ಮದು, ಹಲವಾರು ಯೋಜನೆಗಳನ್ನು ರೈತರಿಗೆ ನೀಡಲಾಗಿದೆ ಎಂದರು.

ಭದ್ರಾ ಮೇಲ್ಡಂಡೆ ಯೋಜನೆ ಎಂಬ ಭಗೀರಥ ಪ್ರಯತ್ನ

ಜಲ ಸಂಪನ್ಮೂಲ ಸಚಿವರಾಗಿದ್ದಾಗ ವಾಣಿ ವಿಲಾಸ ಸಾಗರ ಹಾಗೂ ಮಾರಿಕಣಿವೆಗೆ ಭೇಟಿ ನೀಡಿದ್ದೆ, ಮಹಾರಾಜರು ಕಟ್ಟಿಸಿದ ಅಣೆಕಟ್ಟು ಬರಿದಾಗಿತ್ತು. ಇಲ್ಲಿನ ಜನತೆ ನೀರಿಗಾಗಿ ಪರದಾಡುತ್ತಿದ್ದರು, ಅಂದೇ ತೀರ್ಮಾನಿಸಿ ಇವರು ಹೇಗಾದರೂ ನೀರು ಕಲ್ಪಿಸುವ ಸಂಕಲ್ಪ ಮಾಡಿದೆ. ಭದ್ರಾ ಮೇಲ್ದಂಡೆ ಯೋಜನೆ ಎಂಬುದು ಮಧ್ಯ ಕರ್ನಾಟಕ ಭಾಗದ ಜನರ ಕನಸು. ಯೋಜನೆ ಸಾಕರಕ್ಕೆ ತಾಂತ್ರಿಕ ರೂಪರೇಷೆಗಳನ್ನು ನೀಡಿ. ಮಲೆನಾಡಿ ಭದ್ರೆಯನ್ನು ಮಾರಿಕಣಿವೆಗೆ ತರಲಾಯಿತು. ಯೋಜನೆಗೆ ಆರಂಭದಲ್ಲಿ ಸಾಕಷ್ಟು ವಿರೋಧ ವ್ಯಕ್ತವಾಯಿತು.

ಜನರು ನೀರಾವರಿ ಇಲಾಖೆ ಜೀಪು ಸುಟ್ಟು ಪ್ರತಿಭಟನೆ ಮಾಡಿದರು. ಅಂತಿಮವಾಗಿ ಜನರ ಮನ ಒಲಿಸಿ, ಭೂಸ್ವಾಧೀನ ಪಡಿಸಿಕೊಂಡು ಹಗಲಿರುಳು ಶ್ರಮಿಸಿ, ವಾಣಿ ವಿಲಾಸದ ಹಿನ್ನೀರಿಗೆ ನೀರು ತುಂಬಿಸಲಾಯಿತು. ಅಜ್ಜಂಪುರ ಭಾಗದ ರೈತರ ತ್ಯಾಗದ ಪ್ರತಿಫಲವೇ ಈ ನೀರು.‌ 39 ಟಿ.ಎಂ.ಸಿ ಸಾಮಾರ್ಥ್ಯದ ಅಣೆಕಟ್ಟು ತನ್ನ ಪೂರ್ಣ ಸಾಮರ್ಥ್ಯದಲ್ಲಿ ಜನರಿಗೆ ಉಪಯೋಗವಾಗಬೇಕು.‌

ಹೆಚ್ಚುವರಿ 5 ಟಿ.ಎಂ.ಸಿ ನೀರು ಅಣೆಕಟ್ಟೆಗೆ ಹರಿಸಲಾಗುವುದು.36916 ಹೆಕ್ಟೇರ್ ಪ್ರದೇಶಕ್ಕೆ ಹನಿ ನೀರಾವರಿ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಲಾಗಿದೆ. ನೀರಾವರಿ ಜಮೀನಲ್ಲಿ ರೈತರು ಉತ್ತಮ‌ ಬೆಳೆ ಬೆಳೆದು ಸಮೃದ್ಧ ಜೀವನ ನಡೆಸಬಹುದು. ಭಗೀರಥ ಪ್ರಯತ್ನದಂತೆ ಛಲ ಬಿಡದೆ ಭದ್ರಾ ಮೇಲ್ಡಂಡೆ ಜಾರಿ ಮಾಡಲಾಗಿದೆ ಎಂದರು.

ಯೋಜನೆಗೆ ರಾಷ್ಟ್ರೀಯ ಮಾನ್ಯತೆ : 13 ಸಾವಿರ ಕೋಟಿ ಹಣ ಮಂಜೂರು

ಪ್ರಧಾನ ಮಂತ್ರಿಗಳು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ, ಭದ್ರಾ ಮೇಲ್ಡಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯಾಗಿ ಘೋಷಿಸಲಿದ್ದಾರೆ. ಯೋಜನೆಗೆ ಕೇಂದ್ರ ಸರ್ಕಾರ 13 ಸಾವಿರ ಕೋಟಿ ಹಣ ಮಂಜೂರು ಮಾಡಲಿದೆ. ರಾಜ್ಯ ಸರ್ಕಾರದಿಂದ ಪೂರಕ ದಾಖಲೆ ಹಾಗೂ ಬೇಡಿಕೆಗಳನ್ನು ಸಲ್ಲಿಸಲಾಗಿದೆ ಎಂದರು.

100 ವರ್ಷಗಳ ಬವಣೆಗೆ ಮುಕ್ತಿ : 136 ಕೋಟಿ ವೆಚ್ಚದ ಸೇತುವೆ ನಿರ್ಮಾಣ

ವಾಣಿ ವಿಲಾಸಸಾಗರ ಹಿನ್ನೀರಿನ ಪ್ರದೇಶದ ಶ್ರೀರಾಂಪುರ, ಮತ್ತೋಡು, ಮಾಡದಕೆರೆ ಹೋಬಳಿಯ ಜನತೆ 100 ವರ್ಷಗಳಿಂದ ಸೂಕ್ತ ಸಂಪರ್ಕ ಇಲ್ಲದೆ ಬವಣೆ ಪಡುತ್ತಿದ್ದರು. ಜಿಲ್ಲಾ ಕೇಂದ್ರಕ್ಕೆ ಹೋಗಲು 60 ಕಿ.ಮೀ ರಸ್ತೆಯನ್ನು ಸುತ್ತಿ ಕ್ರಮಿಸಬೇಕಿತ್ತು. ಇದನ್ನು ಸರಿ ಪಡಿಸಲು ಶಾಸಕ ಗೂಳಿಹಟ್ಟಿ ಶೇಖರ್ ಯಡಿಯ್ಯೂರಪ್ಪನವರು ಮುಖ್ಯಮಂತ್ರಿ ಇದ್ದಾಗ ಬೇವಿನಹಳ್ಳಿ ಗ್ರಾಮದಿಂದ ಹುಣಸೇಕಟ್ಟಿ ಗ್ರಾಮದ ನಡುವೆ ಸೇತುವೆ ಹಾಗೂ ರಸ್ತೆ ನಿರ್ಮಾಣ ಕಾಮಗಾರಿಗೆ ಮಂಜೂರಾತಿ ಪಡೆದಿದ್ದರು.

ಆರಂಭದಲ್ಲಿ 86 ಕೋಟಿ ರೂಪಾಯಿ ಇದ್ದ ವೆಚ್ಚ ಅಧಿಕವಾಯಿತು. 50 ಕೋಟಿ ಹೆಚ್ಚುವರಿ ಅನುದಾನ ನೀಡಿಲಾಗಿದೆ. ಈ ಸಂಪರ್ಕ ಸೇತುವೆಯಿಂದ ಕೇವಲ 10 ಕಿ.ಮೀ ನಲ್ಲಿ ಮುಖ್ಯ ರಸ್ತೆಗೆ ತಲುಪಬಹುದು. ಇದರಿಂದ 48 ಕಿ.ಮೀ.ಉಳಿತಾಯವಾಗಲಿದೆ. ಗೂಳಿಹಟ್ಟಿ ಶೇಖರ ಜನೋಪಯೋಗಿ ಶಾಸಕ. ಹಠ ಬಿಡದೆ ಮಂಜೂರಾತಿ ತಂದಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಪ್ರಶಂಸಿದರು.

ಜಲಸಂಪನ್ಮೂಲ ಸಚಿವ ಗೋವಿಂದ ಎಂ ಕಾರಜೋಳ ಮಾತನಾಡಿ, ಈ ಭಾಗದ ಜನರು ಬಹುದಿನದ ಬೇಡಿಕೆ ಈಡೇರುವಂತಾಗಿದೆ. ಕುಡಿಯುವ ನೀರು ಹಾಗೂ ಅಂತರ್ಜಲ ವೃದ್ಧಿಸಿಕೊಂಡು ರೈತರು ಬದುಕು ಹಸನಾಗಿಸಿಕೊಳ್ಳಬೇಕು ಎಂದರು.

ಪ್ರಸ್ತಾವಿಕವಾಗಿ ಮಾತನಾಡಿದ ಶಾಸಕ ಗೂಳಿಹಟ್ಟಿ ಡಿ ಶೇಖರ್ ಅವರು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ತಮ್ಮ ಒಡವೆ ಅಡವಿಟ್ಟು ನಿರ್ಮಿಸಿದ ಡ್ಯಾಂ. ಇಂದು ನೂರಾರು ಸಾವಿರಾರು ರೈತರಿಗೆ ಸಹಕಾರಿಯಾಗಿದೆ. ಮತ್ತೋಡು ಮಾಡದಕೆರೆ ಹಾಗೂ ಶ್ರೀರಾಂಪುರ ಹೋಬಳಿಯ ಜನತೆ ಹಾಗೂ ತಾಲ್ಲೂಕಿನ ಅಭಿವೃದ್ಧಿ ಗಾಗಿ ಹಲವು ಅನುದಾನ ನೀಡಿರುವ ಮುಖ್ಯಮಂತ್ರಿಗಳಿಗೆ ಧನ್ಯವಾದ ತಿಳಿಸಿದರು.

ನಗರಾಭಿವೃದ್ಧಿ ಸಚಿವ ಬಿ. ಎ ಬಸವರಾಜ, ಕೃಷಿ ಸಚಿವ ಬಿ.ಸಿ ಪಾಟೀಲ್, ವಿಧಾನಪರಿಷತ್ ಸದಸ್ಯ ಕೆ.ಎಸ್ ನವೀನ್, ರಾಜ್ಯ ಖನಿಜ ನುಗಮ ಮಂಡಳಿ ಅಧ್ಯಕ್ಷ ಲಿಂಗಮೂರ್ತಿ, ಸಮಾಜ ಕಲ್ಯಾಣ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಹೊಳಲ್ಕೆರೆ ಶಾಸಕ ಚಂದ್ರಪ್ಪ, ಜಲ ಸಂಪನ್ಮೂಲ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಡಿ ಸಿ ಕವಿತಾ ಎಸ್ ಮನ್ನಿಕೇರಿ, ಸಿಇಓ ಡಾ. ನಂದಿನಿ ದೇವಿ ಇದ್ದರು.

Share This Article
Leave a Comment

Leave a Reply

Your email address will not be published. Required fields are marked *