ಕಾಂಗ್ರೆಸ್ , ಬಿಜೆಪಿ ನಡುವೆ ಟ್ವಿಟ್ಟರ್ ವಾರ್

suddionenews
2 Min Read

ಬೆಂಗಳೂರು: ‌ಭ್ರಷ್ಟಾಚಾರದ ಬಗ್ಗೆ ಆಪ್ತರಿಂದಲೇ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಬಗ್ಗೆ ಮಾತಾಡಿದ್ದಾರೆ ಎನ್ನಲಾದ ವಿಡಿಯೋ ರಿಲೀಸ್ ಬೆನ್ನೆಲ್ಲೇ ಬಿಜೆಪಿ ಸರಣಿ ಟ್ವೀಟ್ ಮೂಲಕ ಕೆಪಿಸಿಸಿ ಅಧ್ಯಕ್ಷರ ವಿರುದ್ದ ಕಿಡಿಕಾರಿದೆ.

ಡಿಕೆ ಶಿವಕುಮಾರ್ ಭ್ರಷ್ಟಾಧ್ಯಕ್ಷ ಎನ್ನುವ ಹ್ಯಾಷ್ ಟ್ಯಾಗ್​ನೊಂದಿಗೆ ಟ್ವೀಟ್ ಮಾಡಿ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದು, ಸ್ಪಷ್ಟೀಕರಣ ನೀಡುವಂತೆ ಬಿಜೆಪಿ ಆಗ್ರಹಿಸಿದೆ.

ಕೆಪಿಸಿಸಿ ಕಚೇರಿಯಲ್ಲೇ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಭ್ರಷ್ಟಾಚಾರವನ್ನು ಕಾಂಗ್ರೆಸ್ ಪಕ್ಷದ ರಾಜ್ಯ ಪದಾಧಿಕಾರಿಗಳು ತೆರೆದಿಟ್ಟಿದ್ದಾರೆ. ಭ್ರಷ್ಟಾಚಾರಕ್ಕೆ ಕಾಂಗ್ರೆಸ್‌ ಪಕ್ಷ ತವರು ಮನೆಯಾಗಿದೆ ಎಂದು ಭ್ರಷ್ಟಾಧ್ಯಕ್ಷ ಹ್ಯಾಷ್ ಟ್ಯಾಗ್​ನೊಂದಿಗೆ ಬಿಜೆಪಿ ಟ್ವೀಟ್ ಮಾಡಿದೆ.
ನೀವು ಸ್ಪಷ್ಟನೆ ನೀಡಲೇಬೇಕಲ್ಲವೇ ?ಡಿ ಕೆ ಶಿವಕುಮಾರ್ ಅವರೇ, ಸೀಸರ್‌ನ ಪತ್ನಿ ಅನುಮಾನಕ್ಕೆ ಅತೀತವಾಗಿರಬೇಕೆಂಬ ಮಾತಿದೆ. ಆದರೆ ಕೆಪಿಸಿಸಿ ಪಕ್ಷದ ವೇದಿಕೆಯಲ್ಲೇ ನಿಮ್ಮವರೇ ನಿಮ್ಮ ಬಗ್ಗೆ ಆಡಿರುವ ಅಧಿಕೃತ ಮಾತುಗಳ ಬಗ್ಗೆ ನೀವು ಸ್ಪಷ್ಟನೆ ನೀಡಲೇಬೇಕಲ್ಲವೇ ಎಂದು ಪ್ರಶ್ನಿಸಿದೆ.‌

ಭ್ರಷ್ಟಾಧ್ಯಕ್ಷನ ಧನ ಸಂಪಾದನೆಯ ಮಾರ್ಗ ಯಾವುದೆಂದು ತಿಳಿಸಿದ್ದಾರೆ
ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರ ಮೇಲೆ ನಡೆದ ಐಟಿ, ಇಡಿ ದಾಳಿ ರಾಜಕೀಯ ಪ್ರೇರಿತ ಎನ್ನುವ ಕಾಂಗ್ರೆಸಿಗರೇ, ನಿಮ್ಮ ಭ್ರಷ್ಟಾಧ್ಯಕ್ಷನ ಧನ ಸಂಪಾದನೆಯ ಮಾರ್ಗ ಯಾವುದೆಂದು ಕಾಂಗ್ರೆಸ್ ನಾಯಕ ಉಗ್ರಪ್ಪ ಹಾಗೂ ಸಲೀಂ ಅವರು ಸ್ಪಷ್ಟಪಡಿಸಿದ್ದಾರೆ.

ಈಗಲೂ ಐಟಿ ದಾಳಿ ರಾಜಕೀಯ ಪ್ರೇರಿತ ಎನ್ನುತ್ತೀರಾ‌ ಎಂದು ಟ್ವೀಟ್ ಮೂಲಕ ಪ್ರಶ್ನಿಸಿದೆ.
“ಡಿಕೆಶಿ ಪದಚ್ಯುತಿ”ಮುಖ್ಯಮಂತ್ರಿಯಾಗುವ ಡಿ ಕೆ ಶಿವಕುಮಾರ್ ಅವರ ಕನಸಿಗೆ ರಾಜ್ಯ ಕಾಂಗ್ರೆಸ್ ಪಕ್ಷದ ನಾಯಕರೇ ಎಳ್ಳು ನೀರು ಬಿಟ್ಟಿದ್ದಾರೆ. ನಿಮ್ಮ ಅಧ್ಯಕ್ಷ ಗಿರಿಯ ತಕ್ಕಡಿ ಏಳುತ್ತಲೇ ಇಲ್ಲ ಎಂದು‌ ಸ್ವಪಕ್ಷೀಯರೇ ಷರಾ ಬರೆದುಬಿಟ್ಟಿದ್ದಾರೆ. ಈ ಮಾತುಗಳು, ಸಿದ್ದರಾಮಯ್ಯ ಅವರ ಬಹುದಿನಗಳ ಡಿಕೆಶಿ ಪದಚ್ಯುತಿ ಎಂಬ ಮಾಸ್ಟರ್‌ ಪ್ಲಾನ್‌ನ ಭಾಗವೇ ಎಂದು ಬಿಜೆಪಿ ಕೆಣಿಕಿದೆ‌.

ಕಾಂಗ್ರೆಸ್​ ವಿರುದ್ಧದ ಸರಣಿ ಟ್ವೀಟ್​ಗೆ ಇದೀಗ ಕಾಂಗ್ರೆಸ್​ ತಿರುಗೇಟು ನೀಡಿದೆ. ಅನಧಿಕೃತ ಮಾತುಗಳನ್ನು ಇಟ್ಟುಕೊಂಡು ರೊಟ್ಟಿ ನೆಕ್ಕುತ್ತಿರುವ ಬಿಜೆಪಿ, ತಮ್ಮದೇ ಪಕ್ಷದವರು ಅಧಿಕೃತವಾಗಿಯೇ ಪತ್ರಿಕಾಗೋಷ್ಠಿ ನಡೆಸಿಯೇ ಮಾಡಿದ ಆರೋಪಗಳಿಗೆ ಉತ್ತರ ನೀಡಲಿ. ನೀರಾವರಿ ಹಗರಣದ ಬಗ್ಗೆ ಹೆಚ್. ವಿಶ್ವನಾಥ್ ಅವರ ಆರೋಪ, ಬಿಎಸ್​ವೈ ಕುಟುಂಬದ ಭ್ರಷ್ಟಾಚಾರ ಆರೋಪಗಳಿಗೆ ಮೊದಲು ಬಿಜೆಪಿ ತನ್ನ ‘ಅಧಿಕೃತ’ ಎಂಬ ಮುದ್ರೆ ಒತ್ತಲಿ ಎಂದು ಕಾಂಗ್ರೆಸ್​ ಟ್ವೀಟ್​ ಮಾಡಿದೆ.

Share This Article
Leave a Comment

Leave a Reply

Your email address will not be published. Required fields are marked *