ಲಾಭ ಬರುತ್ತೋ.. ಬರಲ್ವೋ.. ಅದನ್ನೆಲ್ಲಾ ರೈತ ಮೊದಲೇ ಯೋಚಿಸುವುದಿಲ್ಲ. ಬದಲಿಗೆ ಮೊದಲು ಕಷ್ಟಪಟ್ಟು, ಶ್ರಮವಹಿಸಿ ಬೆಳೆ ಬೆಳೆಯುತ್ತಾನೆ. ಫಸಲು ಬಂದ ಮೇಲೆ ಲಾಭ ನಷ್ಟದ ಬಗ್ಗೆ ಯೋಚನೆ ಮಾಡುತ್ತಾನೆ. ಇದು ರೈತನ ಕಾಯಕ. ಆದ್ರೆ ಆ ರೈತನಿಗೆ ಕೆಲವೊಂದು ಸಲ ಲಕ್ ಅನ್ನೋದು ಕೈ ಕೊಟ್ಟು ಬಿಡುತ್ತದೆ. ಅಂಥದ್ದೇ ಪರಿಸ್ಥಿತಿ ಇಲ್ಲೊಬ್ಬ ರೈತನಿಗೆ ಒದಗಿದೆ. ಅಳುವಂತೆಯೂ ಇಲ್ಲ, ಸಮಾಧಾನ ಮಾಡಿಕೊಳ್ಳುವಂತೆಯೂ ಇಲ್ಲ. ಯಾಕಂದ್ರೆ ಅಲ್ಲಿ ರೈತನಿಗೆ ನಷ್ಟವಾಗಿಲ್ಲ. ಬದಲಿಗೆ ಎರಡು ರೂಪಾಯಿ ಲಾಭ ಬಂದಿದೆ.
ಸೊಲ್ಲಾಪುರದ ಬಾರ್ಶಿ ತಹಸಿಲ್ ನ ನಿವಾಸಿ ರಾಜೇಂದ್ರ ಚೌಹಾಣ್ ಎಂಬ ರೈತ ಈರುಳ್ಳಿಯನ್ನು ಬೆಳೆದಿದ್ದರು. ತಮ್ಮ ಊರಿನ ಮಾರುಕಟ್ಟೆಗೆ ಹಾಕಿದರೆ ಅಷ್ಟೊಂದು ಬೆಲೆ ಸಿಗಲ್ಲ ಎಂಬ ಕಾರಣಕ್ಕೆ ದೂರದ ಸುಮಾರು 70 ಕಿಲೋ ಮೀಟರ್ ದೂರದಲ್ಲಿರುವ ಸೊಲ್ಲಾಪುರ ಮಾರುಕಟ್ಟೆಗೆ ಈರುಳ್ಳಿಯನ್ನು ತಂದಿದ್ದರು. ಬಸ್ ಖರ್ಚು, ಕೂಲಿಗಾರನ ಖರ್ಚು ಅಂತ ಸಿಕ್ಕಾಪಟ್ಟೆ ಖರ್ಚು ಕೂಡ ಆಗಿತ್ತು. ಆದರೆ ರೈತನಿಗೆ ಬಂದ ಲಾಭ ನೋಡಿದ್ರೆ ಎಲ್ಲರೂ ಶಾಕ್ ಆಗಬೇಕು.
ಸುಮಾರು 512ಕೆಜಿ ಈರುಳ್ಳಿಯನ್ನು ರೈತ ಮಾರಾಟ ಮಾಡಿದ್ದ. ಆದ್ರೆ ರೈತನ ನತಾದೃಷ್ಟ ಎಂಬಂತೆ ಈರುಳ್ಳಿ ಬೆಲೆ ಕುಸಿತವಾಗಿತ್ತು. ಇದರಿಂದ ಒಂದು ಕೆಜಿಯನ್ನು ಒಂದು ರೂಪಾಯಿಗೆ ಮಾರಾಟ ಮಾಡಿದ್ದರು. ಹೀಗಾಗಿ 512 ರೂಪಾಯಿ ಹಣ ಬಂದಿದೆ. ಅದರಲ್ಲಿ ಎಲ್ಲಾ ಖರ್ಚು ವೆಚ್ಚಗಳನ್ನು ಕಳೆದು ನೋಡಿದಾಗ ರೈತನಿಗೆ ಸಿಕ್ಕಿದ್ದು, ಉಳಿದಿದ್ದು ಎರಡು ರೂಪಾಯಿ ಮಾತ್ರ. ಅದನ್ನು ಚೆಕ್ ನಲ್ಲಿಯೇ ನೀಡಿದ್ದಾರೆ.