ಸುದ್ದಿಒನ್, ನವದೆಹಲಿ : ನೂತನ ಸಂಸತ್ ಭವನ ಕಟ್ಟಡದ ಶಿಲಾನ್ಯಾಸಕ್ಕೆ ಪ್ರಧಾನಿ ಮೋದಿ ಗುರುವಾರ ಭೂಮಿ ಪೂಜೆ ನೆರವೇರಿಸಿದರು.
ದೆಹಲಿಯ ಇಂಡಿಯಾ ಗೇಟ್ ಬಳಿಯ ಸೆಂಟ್ರಲ್ ವಿಸ್ಟಾದಲ್ಲಿ ಶಿಲಾನ್ಯಾಸ ಕಾರ್ಯಕ್ರಮ ನಡೆಯಿತು. ಟಾಟಾ ಟ್ರಸ್ಟ್ ಚೇರ್ಮನ್ ರತನ್ ಟಾಟಾ, ಕೇಂದ್ರ ಗೃಹ ಸಚಿವ ಅಮಿತ್ ಶಾ, ರಾಜ್ಯಸಭೆ ಉಪ ಸಭಾಪತಿ ಹರಿವಂಶ್ ನಾರಾಯಣ್ ಸಿಂಗ್, ಕೇಂದ್ರ ಸಚಿವ ಹೆಚ್ಎಸ್ ಪುರಿ ಹಾಗೂ ಹಲವು ಧಾರ್ಮಿಕ ಮುಖಂಡರು ಭಾಗಿಯಾಗಿದ್ದಾರೆ.
ನೂತನ ಸಂಸತ್ ಭವನ ಕಟ್ಟಡ ನಿರ್ಮಾಣ ಕಾಮಗಾರಿ ಹೊಣೆಯನ್ನು ಟಾಟಾ ಪ್ರಾಜೆಕ್ಟ್ ಸಂಸ್ಥೆಗೆ ನೀಡಿದೆ. ಹೊಸ ಸಂಸತ್ತಿನ ಕಟ್ಟಡ ಒಟ್ಟು 20,000 ಕೋಟಿ ರೂ.ಗಳ ಯೋಜನೆಯಾಗಿದ್ದು, ಸೆಂಟ್ರಲ್ ವಿಸ್ಟಾ ಯೋಜನೆಯ ಪ್ರಮುಖ ಭಾಗವಾಗಿದೆ. ಇದು ರಾಷ್ಟ್ರಪತಿ ಭವನದಿಂದ ಇಂಡಿಯಾ ಗೇಟ್ನ ಯುದ್ಧ ಸ್ಮಾರಕದವರರೆಗಿನ 3 ಕಿ.ಮೀ ವ್ಯಾಪ್ತಿಯನ್ನು ಒಳಗೊಳ್ಳಲಿದೆ.
ಒಟ್ಟು 64,500 ಚ.ಮೀ. ವ್ಯಾಪ್ತಿಯಲ್ಲಿ 971 ಕೋಟಿ ರೂ. ವೆಚ್ಚದಲ್ಲಿ ವಿಶಾಲ ಸಂಸತ್ ಭವನ ನಿರ್ಮಾಣವಾಗಲಿದೆ. ಲೋಕಸಭೆಯಲ್ಲಿ 888 ಸದಸ್ಯರಿಗೆ ಆಸನ ವ್ಯವಸ್ಥೆ ಇರಲಿದ್ದು, ರಾಜ್ಯಸಭೆಯಲ್ಲಿ 384 ಸದಸ್ಯರಿಗೆ ಆಸನ ವ್ಯವಸ್ಥೆ ಕಲ್ಪಿಸಲಾಗುವುದು.
ಅಲ್ಲದೇ ಸಂಸತ್ತಿನ ಜಂಟಿ ಅಧಿವೇಶನದಲ್ಲಿ ಒಟ್ಟು 1,224 ಸದಸ್ಯರಿಗೆ ಆಸನದ ವ್ಯವಸ್ಥೆ ಇರಲಿದೆ. ಅಲ್ಲದೇ ಪ್ರತಿಯೊಬ್ಬ ಸಂಸತ್ ಸದಸ್ಯನಿಗೂ 40 ಚ.ಮೀ ವಿಸ್ತೀರ್ಣದ ಕಚೇರಿಯನ್ನು ಹೊಂದುವ ಅವಕಾಶ ಕೂಡ ಕಲ್ಪಿಸಲಾಗುವುದು. ಇದು 2024ರ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ.
