ಸತ್ಯವನ್ನು ನಿಷ್ಟುರವಾಗಿ ವಚನಗಳ ಮೂಲಕ ತಿಳಿಸಿದ ವಚನಕಾರ ಅಂಬಿಗರ ಚೌಡಯ್ಯ : ಸಾಹಿತಿ ಹುರುಳಿ ಬಸವರಾಜ್

suddionenews
2 Min Read

ಚಿತ್ರದುರ್ಗ, (ಏ.23) :  ಹನ್ನೆರಡನೇ ಶತಮಾನದ ವಚನಕಾರರಲ್ಲಿ ನೇರ, ನಿಷ್ಟುರವಾದಿಯಾಗಿ ನಿಜಶರಣನೆಂದು ಖ್ಯಾತಿಹೊಂದಿದ್ದವರೆಂದರೆ ಅಂಬಿಗರ ಚೌಡಯ್ಯ ಮಾತ್ರ ಎಂದು ಸಾಹಿತಿ ಹುರುಳಿ ಬಸವರಾಜ್ ಹೇಳಿದರು.

ನಗರದ ಕಾಮನಬಾವಿ ಬಡಾವಣೆಯ ರಾಘವೆಂದ್ರ ವಿದ್ಯಾಸಂಸ್ಥೆಯಲ್ಲಿ ಶನಿವಾರ ಚಿತ್ರದುರ್ಗ ಜಿಲ್ಲಾ ಕಸಾಪ ವತಿಯಿಂದ ನಡೆದ ಶರಣ ಅಂಬಿಗರ ಚೌಡಯ್ಯ ಹಾಗು ಸಮಾಜ ಸೇವೆ ಮತ್ತು ಮಾನವೀಯತೆಯಲ್ಲಿನ ನಂಬಿಕೆ ಎನ್ನುವ ವಿಷಯದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವಚನ ಸಾಹಿತ್ಯವೆಂದರೆ ಅದು ಜನಸಾಮಾನ್ಯರ ಸಾಹಿತ್ಯವಾಗಿ ಜನಪ್ರಿಯತೆಯನ್ನು ಪಡೆದುಕೊಂಡಿದೆ. ಅದು ಜನರ ಜೀವನದ ಅನುಭಾವಗಳ ಸಾರತೆಯಿಂದ ಕೂಡಿದ ಸಾಹಿತ್ಯವಾಗಿ ಈಗಲೂ ನಮ್ಮ ಮುಂದಿದೆ ಎಂದರೆ ವಚನಗಳ ಸಾರ್ವಕಾಲಿಕ ಸತ್ಯವಾಗಿರುವುದೇ ಅವುಗಳ ಜನಪ್ರಿಯತೆಗೆ ಸಾಕ್ಷಿ.

ಅಂಬಿಗರ ಚೌಡಯ್ಯನವರು ಸಾಕಷ್ಟು ವಚನಗಳು ಇವೆಯಾದರೂ ಕೇವಲ 280 ವಚನಗಳು ಸಾಹಿತ್ಯ ಲೋಕಕ್ಕೆ ಲಭಿಸಿವೆ. ಒಂದೊಂದು ವಚನಗಳು ಸಹ ನೇರವಾಗಿ ಸಮಾಜದಲ್ಲಿ ಮೌಢ್ಯತೆಯನ್ನು ಎತ್ತಿತೋರಿಸಿ ಜನರನ್ನು ಸರಿದಾರಿಗೆ ತರುವಲ್ಲಿ ಸಹಕಾರಿಯಾಗಿವೆ. ಸತ್ಯ, ನಿಷ್ಟೆ, ಕಾಯಕವೇ ದೇವರು ಎಂದು ನಂಬಿದ್ದ ಚೌಡಯ್ಯ,  ಕಲ್ಲದೇವರ ಪೂಜೆ ಮಾಡಿ ಕಲಿಯುಗದ ಕತ್ತೆಗಳಾಗಿ ಹುಟ್ಟಿದರು. ಮಣ್ಣದೇವರ ಪೂಜಿಸಿ ಮಾನ ಹೀನರಾದರು.ಮರದೇವರ ಪೂಜಿಸಿ ಮಣ್ಣು ಕೂಡಿದರು ಎಂಬ ವಚನವನ್ನು ಉಲ್ಲೇಖಿಸಿ ಚೌಡಯ್ಯನವರ ವಚನದಲ್ಲಿನ ಬಂಡಾಯತನ, ಸಮಾಜದ ಮೌಢ್ಯಗಳನ್ನು ಖಂಡಿಸುವ ಎದೆಗಾರಿಕೆಯನ್ನು ಚೌಡಯ್ಯನವರು ಹೊಂದಿದ್ದರು. ಎಂದು ಅವರ ಹಲವಾರು ವಚನಗಳನ್ನು ಉಲ್ಲೇಖಿಸಿ ವಿಶ್ಲೇಷಿಸಿದರು.

ವಿನ್ಸೆಂಟ್ ಲೀನಾ ಸ್ಮಾರಕ ದತ್ತಿ ವಿಷಯವಾದ ಸಮಾಜ ಸೇವೆ ಮತ್ತು ಮಾನವೀಯತೆಯಲ್ಲಿನ ನಂಬಿಕೆ ಎನ್ನುವ ಬಗ್ಗೆ ಉಪನ್ಯಾಸ ನೀಡಿದ ಉಪನ್ಯಾಸಕಿ ತ್ರಿವೇಣಿ ಮಾತನಾಡಿ, ಉತ್ತಮ ಸಮಾಜ ನಿರ್ಮಾಣ ಮಾಡಲು ಪ್ರತಿಯೊಬ್ಬರು ಮಾನವೀಯತೆಯಲ್ಲಿನ ನಂಬಿಕೆ ಮತ್ತು  ನಿಸ್ವಾರ್ಥ ಸಮಾಜ ಸೇವೆ ಮಾಡಿದರೆ ಅವರು ಎಂದೆಂದಿಗೂ ಜನಮಾನಸದಲ್ಲಿ ಶಾಶ್ವತವಾಗಿ ಉಳಿಯುತ್ತಾರೆ. ಎಂದು ಮದರ್ ತೆರೇಸಾ ಅವರ ಜೀವನವನ್ನು  ಉಲ್ಲೇಖಿಸಿ ವಿವರಿಸಿದರು. ಮುಂದೆ ಶಿಕ್ಷಕರಾಗುವ ನೀವುಗಳು ಮಾನವೀಯತೆಯನ್ನು ನಿಮ್ಮಲ್ಲಿ ರೂಢಿಸಿಕೊಂಡರೆ ನೀವು ಮಾಡುವ ಬೋಧನೆಯಲ್ಲಿ ತಾನಾಗೇ ಬರುತ್ತದೆ. ಅಂತಹ ಪಾವಿತ್ರ್ಯ ವೃತ್ತಿ ಶಿಕ್ಷಕರದ್ದಾಗಿದೆ ಎಂದು ಪ್ರಶಿಕ್ಷಣಾರ್ಥಿಗಳಿಗೆ ತಿಳಿಸಿದರು.

ದತ್ತಿದಾನಿಗಳಾದ ಎಸ್.ಕೃಷ್ಣಮೂರ್ತಿ, ರಾಘವೇಂದ್ರ ಬಿಇಡಿ ಕಾಲೇಜಿನ ಪ್ರಾಂಶುಪಾಲ ಡಾ.ಎ.ಜಿ.ಬಸವರಾಜಪ್ಪ, ಜಿಲ್ಲಾ ಕಸಾಪ ಅಧ್ಯಕ್ಷ ಕೆ.ಎಂ.ಶಿವಸ್ವಾಮಿ ಕಾರ್ಯಕ್ರಮವನ್ನು ಕುರಿತು ಮಾತನಾಡಿದರು.
ಉಪ ಪ್ರಾಚಾರ್ಯರಾದ ವಿ.ಕವಿತಾ, ಜಿಲ್ಲಾ ಕಸಾಪ ಗೌರವ ಕೋಶಾಧ್ಯಕ್ಷ ಚೌಳೂರು ಲೋಕೇಶ್, ಗೌರವ ಕಾರ್ಯದರ್ಶಿ  ಹಾಗು ಕಾರ್ಯಕ್ರಮದ ಸಂಚಾಲಕ ಕೆ.ಪಿ.ಎಂ. ಗಣೇಶಯ್ಯ ಇದ್ದರು.

 

ಪೋಟೊ:23 ಸಿಟಿಎ 1ಪಿ
ಚಿತ್ರದುರ್ಗ ನಗರದ ಕಾಮನಬಾವಿ ಬಡಾವಣೆ ರಾಘವೇಂದ್ರ ವಿದ್ಯಾಸಂಸ್ಥೆಯಲ್ಲಿ ಚಿತ್ರದುರ್ಗ ಜಿಲ್ಲಾ ಕಸಾಪ ವತಿಯಿಂದ ನಡೆದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಸಾಹಿತಿ ಹುರುಳಿ ಬಸವರಾಜ್ ಮಾತನಾಡಿದರು. ಜಿಲ್ಲಾ ಕಸಾಪ ಅಧ್ಯಕ್ಷ ಕೆ.ಎಂ.ಶಿವಸ್ವಾಮಿ ಗೌರವ ಕೋಶಾಧ್ಯಕ್ಷ ಚೌಳೂರು ಲೋಕೇಶ್, ಗೌರವ ಕಾರ್ಯದರ್ಶಿ  ಹಾಗು ಕಾರ್ಯಕ್ರಮದ ಸಂಚಾಲಕ ಕೆ.ಪಿ.ಎಂ. ಗಣೇಶಯ್ಯ ಇದ್ದರು.

Share This Article
Leave a Comment

Leave a Reply

Your email address will not be published. Required fields are marked *