ಅಹಮದಾಬಾದ್: 2023ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಬಹುಮತ ಬರುವುದಿಲ್ಲ. ಬಿಜೆಪಿ ಮತ್ತು ಜೆಡಿಎಸ್ ಒಂದಾಗಿ ಅಧಿಕಾರ ನಡೆಸಲಿದ್ದಾರೆ ಎಂಬ ಮಾತು ಅಲ್ಲಲ್ಲಿ ಕೇಳಿ ಬರುತ್ತಾ ಇದೆ. ಅದಕ್ಕೆ ತಕ್ಕನಾಗಿ ಮಂಡ್ಯಕ್ಕೆ ಅಮಿತ್ ಶಾ ಬಂದಾಗಲೂ ಮಾಜಿ ಪ್ರಧಾನಿ ದೇವೇಗೌಡ ಅವರು, ವೇದಿಕೆ ಹಂಚಿಕೊಂಡಿದ್ದರು. ಆದರೆ ಅಮಿತ್ ಶಾ ಅವರು, ಜೆಡಿಎಸ್ ಮತ್ತು ದೇವೇಗೌಡ ಅವರ ಬಗ್ಗೆ ನೇರವಾಗಿ ವಾಗ್ದಾಳಿ ನಡೆಸಿದ್ದರು. ಇದೀಗ ಸಂಸದ ತೇಜಸ್ವಿ ಸೂರ್ಯ ಅವರು ವಾಗ್ಧಾಳಿ ನಡೆಸಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಸಂಬಂಧಿಸಿದಂತೆ ಕುಮಾರಸ್ವಾಮಿ ಆಡಿರುವ ಮಾತು ಅಸಂಸದೀಯವಾಗಿದೆ. ಇದು ಅವರ ರಾಜಕೀಯ ಹತಾಶೆಯನ್ನು ಪ್ರತಿಬಿಂಬಿಸುತ್ತದೆ. ಜೆಡಿಎಸ್ ಪಕ್ಷ ಈಗಾಗಲೇ ಅಳಿವಿನಂಚಿನಲ್ಲಿದೆ. ಚುನಾವಣೆಯ ಬಳಿಕ ಜೆಡಿಎಸ್ ಪಕ್ಷ ಕರ್ನಾಟಕದಿಂದಾನೇ ನಿರ್ನಾಮವಾಗಲಿದೆ. ಜೆಡಿಎಸ್ ಪಕ್ಷ ಒಂದು ಕೌಟುಂಬಿಕ ಪಕ್ಷ. ಒಂದು ವೇಳೆ ಮಂಡ್ಯದಲ್ಲಿ ಜೆಡಿಎಸ್ ಗೆಲುವು ಕಂಡರೆ ಮಂಡ್ಯ ಜಿಲ್ಲೆಯೂ ಆ ಪಕ್ಷದ ಎಟಿಎಂ ಆಗಲಿದೆ ಎಂದಿದ್ದಾರೆ.
ಅಮಿತ್ ಶಾ ಅವರೇ ನೀವೂ ಜರ್ಮನಿ ಸರ್ವಾಧಿಕಾರಿ ಹಿಟ್ಲರ್ ಸರ್ಕಾರದಲ್ಲಿದ್ದ ಪ್ರೊಪೆಗೆಂಟ್ ಮಿನಿಸ್ಟರ್ ಗೋಬೆಲ್ಸ್ ಅವರ ಪ್ರತಿರೂಪ. ನೀವೂ ಸುಳ್ಳು ಹೇಳುತ್ತೀರಿ. ಇಂತಹ ಅಧೋಗತಿ ನಿಮಗೇಕೆ ಬಂದಿದೆಯೋ ತಿಳಿಯದು ಎಂದು ಮಾಜಿ ಸಿಎಂ ಕುಮಾರಸ್ವಾಮಿ ಕಿಡಿಕಾರಿದ್ದರು.