ಐತಿಹಾಸಿಕ ಕಲ್ಲಿನ ಕೋಟೆ ಹಾಗೂ ಚಂದ್ರವಳ್ಳಿಯಲ್ಲಿ ಸಾಮೂಹಿಕ ಯೋಗ

suddionenews
3 Min Read

ಚಿತ್ರದುರ್ಗ,(ಜೂ.21): ಅಂತರ ರಾಷ್ಟ್ರೀಯ ಯೋಗ ದಿನಾಚರಣೆ ಹಾಗೂ ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಆಯುಷ್ ಇಲಾಖೆ ಹಾಗೂ ಇತರೆ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಚಿತ್ರದುರ್ಗ ನಗರದ ಐತಿಹಾಸಿಕ ಕಲ್ಲಿನ ಕೋಟೆ ಹಾಗೂ ಚಂದ್ರವಳ್ಳಿಯಲ್ಲಿ ಸಾಮೂಹಿಕ ಯೋಗ ಮಾಡುವುದರ ಮೂಲಕ ಅಂತರ ರಾಷ್ಟ್ರೀಯ ಯೋಗ ದಿನಾಚರಣೆ ಆಚರಿಸಲಾಯಿತು.

ಮಾನವೀಯತೆಗಾಗಿ ಯೋಗ ಎಂಬ ಘೋಷವಾಕ್ಯದಡಿ ನಡೆದ ಅಂತರ ರಾಷ್ಟ್ರೀಯ ಯೋಗ ದಿನಾಚರಣೆಯು ಚಿತ್ರದುರ್ಗದ ಐತಿಹಾಸಿಕ ಕಲ್ಲಿನ ಕೋಟೆ ಹಾಗೂ ಚಂದ್ರವಳ್ಳಿಯಲ್ಲಿ ಎರಡು ಕಡೆ ಸಾಮೂಹಿಕ ಯೋಗ ಆಚರಿಸಲಾಯಿತು.

ಯೋಗ ದಿನಾಚರಣೆ ಅಂಗವಾಗಿ ಮುಂಜಾನೆ 5 ಗಂಟೆಯಿಂದಲೇ ಕೋಟೆ ಹಾಗೂ ಚಂದ್ರವಳ್ಳಿಯತ್ತ ಯೋಗಾಭ್ಯಾಸಿಗಳು ನಡೆದುಬಂದರು. ವಿದ್ಯಾರ್ಥಿಗಳು, ಯುವ ಜನರು, ಮಹಿಳೆಯರು, ವೃದ್ಧರು ಸೇರಿದಂತೆ ವಿವಿಧ ವಯೋಮಾನದವರು ಯೋಗಾಭ್ಯಾಸದಲ್ಲಿ ಉತ್ಸಾಹದಲ್ಲಿ ಪಾಲ್ಗೊಂಡರು. ಚಳಿಯ ವಾತಾವರಣ, ತಂಗಾಳಿ, ಹಕ್ಕಿಯ ಚಿಲಿಪಿಲಿಯ ವಾತಾವರಣದ ನಡುವೆ ಕಲ್ಲಿನ ಕೋಟೆ ಹಾಗೂ ಚಂದ್ರವಳ್ಳಿಯ ವಿಶಾಲ ಆವರಣದಲ್ಲಿ ಯೋಗಾಭ್ಯಾಸ ನಡೆಸಿದರು.

ಕೋಟೆ ಆವರಣದಲ್ಲಿ ಮಾರ್ಧನಿಸಿದ ಯೋಗ:

ಐತಿಹಾಸಿಕ ಕಲ್ಲಿನಕೋಟೆ ಆವರಣದಲ್ಲಿ ಯೋಗ ಶಿಕ್ಷಕ ಕೆಂಚವೀರಪ್ಪ ಅವರು ಆಯುಷ್ ಇಲಾಖೆ ಹೊರಡಿಸಿದ ಯೋಗ ಶಿಷ್ಟಾಚಾರದ ಅನುಸಾರ ಯೋಗ ತರಬೇತಿ ನೀಡಿದರು.

ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಮಾತನಾಡಿ, ಮಾನವೀಯತೆಗಾಗಿ ಯೋಗ ಎಂಬುದು ಈ ಬಾರಿ ಯೋಗ ದಿನಾಚರಣೆ ಘೋಷ್ಯವಾಕ್ಯವಾಗಿದ್ದು, ಪ್ರತಿಯೊಬ್ಬರು ದೈಹಿಕ ಹಾಗೂ ಮಾನಸಿಕ ಆರೋಗ್ಯ ಹೆಚ್ಚಿಸಿಕೊಳ್ಳಬೇಕು ಎಂದು ಹೇಳಿದರು.

ಚಂದ್ರವಳ್ಳಿಯಲ್ಲಿ ಸಾಮೂಹಿಕ ಯೋಗ:

ಅಂತರ ರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ನಗರದ ಚಂದ್ರವಳ್ಳಿಯಲ್ಲಿ 500ಕ್ಕೂ ಹೆಚ್ಚು ಜನರಿಂದ ಯೋಗಾಭ್ಯಾಸ ನಡೆಯಿತು. ಯೋಗ ತರಬೇತುದಾರ ರವಿ ಅಂಬೇಕರ್ ಯೋಗ ತರಬೇತಿ ನೀಡಿದರು.

ಜಿಲ್ಲಾ ಆಸ್ಪತ್ರೆ ಹಿರಿಯ ವೈದ್ಯಾಧಿಕಾರಿ ಡಾ.ಸುರೇಶ್ ಮಾತನಾಡಿ, 2014ರಲ್ಲಿ ವಿಶ್ವಸಂಸ್ಥೆಯು 175 ರಾಷ್ಟ್ರಗಳನ್ನೊಳಗೊಂಡಂತೆ ವಿಶ್ವ ಯೋಗ ದಿನಾಚರಣೆಯನ್ನು ಆಚರಿಸುವಂತೆ ಅನುಷ್ಠಾನಗೊಳಿಸಲಾಗಿದೆ. ಅದರಂತೆ ಪ್ರತಿ ವರ್ಷವೂ ಕೂಡ ವಿಶೇಷ ಘೋಷ ವಾಕ್ಯಗಳೊಂದಿಗೆ ವಿಶ್ವ ಅಂತರಾಷ್ಟ್ರೀಯ ಯೋಗ ದಿನಾಚರಣೆ ಆಚರಿಸಲಾಗುತ್ತಿದೆ. ಯೋಗ ಮಾಡುವುದರಿಂದ ಆರೋಗ್ಯ ಹೆಚ್ಚು ಸಮೃದ್ಧಿಸುತ್ತದೆ. ಯೋಗವು ಸುಮಾರು 500 ವರ್ಷಗಳ ಇತಿಹಾಸ ಹೊಂದಿರುವಂತಹ ಕಲೆಯಾಗಿದೆ. ಯೋಗ ಮಾಡುವುದರಿಂದ ಆರೋಗ್ಯದಲ್ಲಿ ಹಿಡಿತವಿದ್ದು, ಮನಸ್ಸಿಗೆ ಶಾಂತಿ ನೆಮ್ಮದಿ ದೊರೆಯುತ್ತದೆ ಎಂದು ತಿಳಿಸಿದರು.

ಬೆಸ್ಕಾಂ ಇನ್ಸ್‍ಪೆಕ್ಟರ್ ಲಕ್ಷ್ಮಿನಾರಾಯಣ ಮಾತನಾಡಿ, 8ನೇ ಅಂತರ ರಾಷ್ಟ್ರೀಯ ಯೋಗ ದಿನಾಚರಣೆಯನ್ನು ದೇಶದಾದ್ಯಂತ ಆಚರಣೆ ಮಾಡಲಾಗುತ್ತಿದೆ. ದಿನನಿತ್ಯದ ಸಮಯದಲ್ಲಿ ಕೆಲಸದ ಜಂಜಾಟದಲ್ಲಿ ಯೋಗ ಮರೆತು ಆರೋಗ್ಯದಲ್ಲಿ ಹಿಡಿತವಿಲ್ಲದಂತಾಗಿದೆ. ಪ್ರತಿಯೊಬ್ಬರು ಯೋಗ ಮಾಡುವುದರಿಂದ ಮನಃ ಶಾಂತಿ ಜೊತೆಗೆ ಆರೋಗ್ಯ ವೃದ್ಧಿಸುತ್ತದೆ ಎಂದು ತಿಳಿಸಿದರು.

ಯೋಗ ತರಬೇತಿದಾರ ರವಿ ಕೆ ಅಂಬೇಕರ್ ಮಾತನಾಡಿ, ಮನಸ್ಸು ಶಾಂತವಾಗಿರಲು ಯೋಗದ ಕಡೆ ಹೆಚ್ಚು ಗಮನ ಹರಿಸಬೇಕು. ಕಾಯಿಲೆಗಳು ಬರುವುದಕ್ಕಿಂತ ಮುಂಚೆ ಯೋಗದಲ್ಲಿ ತೊಡಗಿಕೊಳ್ಳಬೇಕು. ಕಾಯಿಲೆ ಬಂದ ಮೇಲೆ ಯೋಗ ಮಾಡುವುದು ವ್ಯರ್ಥ ತಿಳಿಸಿದರು.

ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣ, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಡಾ.ರಂಗಸ್ವಾಮಿ, ಜಿಲ್ಲಾ ಆಯುಷ್ ಅಧಿಕಾರಿ ಡಾ.ಯು.ಗಿರೀಶ್, ಪುರಾತತ್ವ ಇಲಾಖೆ ಅಧಿಕಾರಿ ಸುಧೀರ್, ರಾಜ್ಯ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಮಂಜುನಾಥ, ಕಾರ್ಯದರ್ಶಿ ಪ್ರದೀಪ್, ಪತಾಂಜಲಿ ಯೋಗ ಸಂಸ್ಥೆಯ ಸುಜಾತ, ರಾಮಲಿಂಗಪ್ಪ, ಚಿತ್ರದುರ್ಗ ಯೋಗ ಸಂಸ್ಥೆ ಅಧ್ಯಕ್ಷ ಮಹಡಿ ಶಿವಮೂರ್ತಿ, ಮಹಿಳಾ ಸಮಾಜದ ಅಧ್ಯಕ್ಷೆ ಮೋಕ್ಷ ರುದ್ರಸ್ವಾಮಿ, ಆಯುಷ್ ವೈದ್ಯಾಧಿಕಾರಿಗಳಾದ ಡಾ. ಪ್ರಶಾಂತ್ ಕುಮಾರ್, ಡಾ.ಉಮೇಶ್ ರೆಡ್ಡಿ, ಡಾ.ಸಂಜೀವ್ ರೆಡ್ಡಿ, ಡಾ.ರಾಜಶೇಖರಯ್ಯ, ಡಾ.ಅನಿಲ್‍ಕುಮಾರ್, ಡಾ.ರಹೀಮಾನ್, ಪ್ರಜಾಪಿತ ಈಶ್ವರಿ ಬ್ರಹ್ಮಕುಮಾರಿ ವಿಶ್ವವಿದ್ಯಾಲಯದ ಕುಮಾರಿ ರಶ್ಮಿ, ದಿವ್ಯ, ಅಮೃತ ಆಯುರ್ವೇದಿಕ್ ಕಾಲೇಜ್ ಪ್ರಾಂಶುಪಾಲ ಡಾ.ಪ್ರಶಾಂತ್, ಆಯುರ್ವೇಧ ಕಾಲೇಜಿನ ವಿದ್ಯಾರ್ಥಿಗಳು, ಸ್ಕೌಟ್ಸ್ ಅಂಡ್ ಗೈಡ್ಸ್, ಜ್ಞಾನ ಭಾರತಿ ಶಾಲಾ ವಿದ್ಯಾರ್ಥಿಗಳು, ಬೆಸ್ಕಾಂ ಜಾಗೃತಿ ದಳದ ಸಿಬ್ಬಂದಿ ವರ್ಗ ಹಾಗೂ ಆಶಾ ಕಾರ್ಯಕರ್ತರು ಹಾಗೂ ಯೋಗಾಸಕ್ತರು ಉಪಸ್ಥಿತರಿದ್ದರು.

 

Share This Article
Leave a Comment

Leave a Reply

Your email address will not be published. Required fields are marked *