ಬೆಂಗಳೂರು: ಸದ್ಯ ರಾಜ್ಯ ರಾಜಕಾರಣದಲ್ಲಿ ಚುನಾವಣಾ ಬಿಸಿ ಜೋರಾಗಿಯೇ ಸುಡುತ್ತಿದೆ. ಮೂರು ಪಕ್ಷಗಳಿಂದ ಭರ್ಜರಿ ಮತ ಬೇಟೆ ಶುರುವಾಗಿದೆ. ಅದರಲ್ಲೂ ಕಾಂಗ್ರೆಸ್ ಈ ಬಾರಿ ಕಮಲದ ಮುಂದೆ ಗೆದ್ದು ಬೀಗಬೇಕೆಂದು ಪಣ ತೊಟ್ಟಿದೆ. ಅದೇ ಕಾರಣಕ್ಕೆ ಜನರ ಬಳಿ ಹೋಗಿ ಮತ ಕೇಳುತ್ತಿದೆ. ಇದರ ನಡುವೆ ಬಿಜೆಪಿಯ ವೋಟ್ ಬ್ಯಾಂಕ್ ಆಗಿರುವ ಲಿಂಗಾಯತ ಸಮುದಾಯವನ್ನು ತನ್ನ ಸೆಳೆಯುತ್ತದೆಯಾ ಎಂಬ ಪ್ರಶ್ನೆಗಳು ಹುಟ್ಟಿಕೊಂಡಿವೆ.
ನಿನ್ನೆ ಬೆಂಗಳೂರಿನಲ್ಲಿ ಕಾಂಗ್ರೆಸ್ ಮುಖಂಡರ ಸಭೆ ನಡೆದಿದೆ. ಈ ಸಭೆಯಲ್ಲಿ ಲಿಂಗಾಯತ ಮುಖಂಡರು ಹಾಗೂ ಟಿಕೆಟ್ ಆಕಾಂಕ್ಷಿಗಳು ಒಟ್ಟು ಸೇರಿದ್ದರು. ಶ್ಯಾಮನೂರು ಶಿವಶಂಕರಪ್ಪ, ಈಶ್ವರ ಖಂಡ್ರೆ, ಎಂಬಿ ಪಾಟೀಲ್ ಸೇರಿದಂತೆ ಹಲವು ಮುಖಂಡರು ಸೇರಿದ್ದರು. ಎರಡೂವರೆ ಗಂಟೆಗೂ ಹೆಚ್ಚು ಕಾಲ ಈ ಸಭೆ ನಡೆದಿದೆ. ಈ ಬಾರಿಯ ಚುನಾವಣೆಯಲ್ಲಿ ಲಿಂಗಾಯತ ಸಮುದಾಯಕ್ಕೆ ಹೆಚ್ಚು ಟಿಕೆಟ್ ನೀಡಬೇಕೆಂದು ಮನವಿ ಮಾಡಿಕೊಳ್ಳಲಾಗಿದೆ. ಸುಮಾರು 50ಕ್ಕೂ ಹೆಚ್ಚು ಟಿಕೆಟ್ ನೀಡಬೇಕೆಂದು ಕೇಳಿಕೊಂಡಿದ್ದಾರೆ.
ಯಾಕಂದ್ರೆ ಕೆಲವೊಂದು ಕ್ಷೇತ್ರದಲ್ಲಿ ಲಿಂಗಾಯತ ಮತಗಳೇ ನಿರ್ಣಾಯಕವಾಗಿದೆ. ಸುಲಭವಾಗಿ ಆ ಕ್ಷೇತ್ರಗಳನ್ನು ಗೆಲ್ಲಬೇಕು ಅಂದ್ರೆ ಲಿಂಗಾಯತ ಸಮುದಾಯಕ್ಕೆ ಮತ ನೀಡಬೇಕಾಗಿದೆ. ಈ ನಿರ್ಧಾರವನ್ನು ಹೈಕಮಾಂಡ್ ಮುಂದೆಯೂ ಇಡಲು ತೀರ್ಮಾನ ಮಾಡಲಾಗಿದೆ. ಈಗಾಗಲೇ ಟಿಕೆಟ್ ಗಾಗಿ 210 ಆಕಾಂಕ್ಷಿಗಳು ಅರ್ಜಿ ಸಲ್ಲಿಕೆ ಮಾಡಿದ್ದು, 74 ಮಂದಿಯ ಹೆಸರು ಶಾರ್ಟ್ ಲೀಸ್ಟ್ ಆಗಿದೆ ಎನ್ನಲಾಗುತ್ತಿದೆ.