ಕ್ರಾಂತಿಕಾರಿ ಬರಹಗಳಿಗೆ ಆದ್ಯತೆ ನೀಡಿ : ರಹಮತ್ ಉಲ್ಲಾ

2 Min Read

ಸುದ್ದಿಒನ್, ಚಿತ್ರದುರ್ಗ, ಡಿಸೆಂಬರ್. 01 : ಪ್ರಸ್ತುತ ದಿನಗಳಲ್ಲಿ ಸಾಹಿತಿಗಳು ಸಾಮಾನ್ಯ ಸಾಮಾಜಿಕ ವಿಷಯಗಳನ್ನೆ ವಸ್ತುಗಳಾಗಿ ಇಟ್ಟುಕೊಂಡು ಕತೆ-ಕವನ- ಕಾದಂಬರಿ ರಚಿಸುವುದು ಸಹಜವಾಗಿದೆ. ಇವುಗಳನ್ನು ಹೊರತಾಗಿ ಸಮಾಜದಲ್ಲಿ ಅಗತ್ಯವಾದ ಬದಲಾವಣೆಗಳನ್ನು ತರಲು ಕ್ರಾಂತಿಕಾರಕ ಬರವಣಿಗೆಗಳು ಅಗತ್ಯವಾಗಿವೆ. ಇಂತಹ ಬರಹಗಳಲ್ಲಿ ಸಾಹಿತಿಗಳು ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕೆಂದು ನಗರದ ಖ್ಯಾತ ವಕೀಲರು ಹಾಗೂ ಚಿನ್ಮೂಲಾದ್ರಿ ಸಾಹಿತ್ಯ ವೇದಿಕೆ ಗೌರವಾಧ್ಯಕ್ಷರಾದ ಬಿ.ಕೆ ರಹಮತ್ತುಲ್ಲಾ ಸಾಹಿತಿಗಳಿಗೆ ಕಿವಿಮಾತು ಹೇಳಿದರು.

ನಗರದ ಕಾಂ.ಜಿ. ಚಂದ್ರಪ್ಪ ಭವನದಲ್ಲಿ ಚಿನ್ಮೂಲಾದ್ರಿ ಸಾಹಿತ್ಯ ವೇದಿಕೆ ಆಯೋಜಿಸಿದ್ದ 70 ನೆಯ ಕನ್ನಡ ರಾಜ್ಯೋತ್ಸವ ಉಪನ್ಯಾಸ ಹಾಗೂ ಕವಿಗೋಷ್ಠಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಕರ್ನಾಟಕದಲ್ಲಿ ಕನ್ನಡಿಗರಾದ ನಾವುಗಳು ಕನ್ನಡವನ್ನು ಬಳಸುವುದಕ್ಕಿಂತ ಹೆಚ್ಚಾಗಿ ಅನ್ಯ ಭಾಷೆಗಳನ್ನು ಬಳಸುತ್ತೇವೆ. ಇಂಗ್ಲಿಷ್, ಹಿಂದಿ, ತೆಲುಗು, ಉರ್ದು, ತಮಿಳು ಹೀಗೆ ವಿವಿಧ ಪರಭಾಷೆಗಳನ್ನು ನಾವು ಬಳಸುವ ಮೂಲಕ ಕನ್ನಡವನ್ನು ಕಡೆಗಣಿಸುತ್ತಿದ್ದೇವೆ. ಅನಿವಾರ್ಯವಲ್ಲದ ಹೊರತು ಬೇರೆ ಭಾಷೆಗಳನ್ನು ಬಳಸುವುದಕ್ಕಿಂತ ಕನ್ನಡವನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸುವುದರಿಂದ ನಾವು ಕನ್ನಡ ನಾಡು-ನುಡಿಗೆ ನಮ್ಮದೇ ಆದ ದೊಡ್ಡ ಕೊಡುಗೆಯನ್ನು ಕೊಟ್ಟ ತೃಪ್ತಿ ನಮಗೆ ಸಿಗುತ್ತದೆ ಎಂದು ತಮ್ಮ ನುಡಿಗಳಲ್ಲಿ ಸಭಿಕರೊಂದಿಗೆ ಹಂಚಿಕೊಂಡರು.

ವಿಶೇಷ ಉಪನ್ಯಾಸ ನೀಡಿದ ಡಾ. ಹಾಲಪ್ಪನವರು ಕನ್ನಡ ಸಾಹಿತ್ಯ ಪಂಥಗಳಾದ ನವೋದಯ, ನವ್ಯ,ಪ್ರಗತಿ ಶೀಲ, ದಲಿತ ಮತ್ತು ಬಂಡಾಯ ಸಾಹಿತ್ಯಗಳ ವಿಶೇಷತೆಯ ಮಾಹಿತಿಯೊಂದಿಗೆ ತಮ್ಮ ಉಪನ್ಯಾಸವನ್ನು ಆರಂಬಿಸುವ ಮೂಲಕ, ಕನ್ನಡಿಗರು ಕನ್ನಡ ಭಾಷೆಯ ಪ್ರಾಚೀನತೆಯನ್ನು ಅರಿಯಬೇಕು, ಭಾಷೆಯ ಉಗಮದ ಬಗ್ಗೆ ಯಾವ ವಿದ್ವಾಂಸರಲ್ಲಿಯೂ ಸ್ಪಷ್ಟೀಕರಣವಿಲ್ಲ. ಎಂದು ಹೇಳಿದರಲ್ಲದೆ, ದಿನ ನಿತ್ಯ ನಾವು ಬಳಸುವ ಇಂಗ್ಲಿಷ್ ಪದಗಳ ಬದಲಾಗಿ ಕನ್ನಡ ಪದಗಳನ್ನು ಬಳಸಬಹುದಾಗಿದೆ, ಉದಾಹಣೆಗೆ ಡೋರ್ ಎಂದು ಹೇಳುವ ಬದಲು ಬಾಗಿಲು ಎನ್ನಬಹುದು. ವಿಂಡೋ ಎನ್ನುವ ಬದಲು ಕಿಟಕಿ ಎನ್ನಬಹುದು ಎಂದು ಸಲಹೆ ನೀಡಿದರು.

ಸಂಸ್ಥಾಪಕರಾದ ದಯಾಪುತ್ತೂರ್ಕರ್, ಅತಿಥಿಗಳಾದ, ರಶ್ಮಿ ಇ. ಎಂ. ಎಸ್, ಲೋಲಾಕ್ಷಮ್ಮ, ಜಯದೇವ ಮೂರ್ತಿ, ಮಾತನಾಡಿದರು. ವೇದಿಕೆಯ ಅಧ್ಯಕ್ಷರಾದ ಡಾ. ಎಸ್. ಎಚ್ ಶಫಿಉಲ್ಲಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡು ಮಾತನಾಡಿ ನಮ್ಮ ಕನ್ನಡ ನಾಡು ನುಡಿ ,ಸಾಹಿತ್ಯ ಮತ್ತು ಭಾಷೆಯನ್ನು ಉಳಿಸುವ ಬೆಳೆಸುವುದು ಪ್ರತಿಯೊಬ್ಬ ಕನ್ನಡಿಗರ ಜವಾಬ್ದಾರಿ ಎಂದರು.

ಶೋಭಾ ಮಲ್ಲಿಕಾರ್ಜುನ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕವಿಗಳಾದ ಪ್ರಹ್ಲಾದ್ ಕರಿ ಓಬನಹಳ್ಳಿ, ವಿನಾಯಕ, ಶಿವರುದ್ರಪ್ಪ, ಬಸವರಾಜ್ ಹರ್ತಿ, ಕೆ. ಟಿ ಶಾಂತಮ್ಮ, ಮೀರನಾಡಿಗ್, ಮಹಮದ್ ಸಾದಾತ್,ಕೆ ಎಸ್ ತಿಪ್ಪಮ್ಮ, ಡಾ. ಗೌರಮ್ಮ, ಸುಮಾ ರಾಜಶೇಖರ್ ಸತ್ಯಪ್ರಭವಸಂತಕುಮಾರ್, ಶಿವಮೂರ್ತಿ.ಟಿ ಕೋಡಿಹಳ್ಳಿ, ವೇದಮೂರ್ತಿ,ಜಯಪ್ರಕಾಶ್, ಮಹೇಂದ್ರ ಕುಮಾರ್ ಶಿವಾನಂದ ಬಂಡೆಹಳ್ಳಿ, ಮುದ್ದುರಾಜ್ ಹುಲಿತೊಟ್ಟಿಲು, ಸ್ಫೂರ್ತಿ, ಹಂಸದಾಸಶಂಕರ್, ಪಗಡಲಬಂಡೆ ನಾಗೇಂದ್ರಪ್ಪ, ಮಹಬೂಬಿ, ಇಂಗಳದಾಳ್ ತಿಮ್ಮಯ್ಯ, ಗಂಗಾಧರ, ಕ್ಲಾಸಿಕ್ ಚಂದ್ರು, ರಂಗಸ್ವಾಮಿ, ಪೆನ್ನಯ್ಯ, ಶಿವರಾಜ್ ನಾಯಕ ಹಾಗೂ ಮತ್ತಿತರ ಕವಿಗಳು ಕವನ ವಾಚನ ಮಾಡಿದರು.

ಕೆ.ಟಿ ಶಾಂತಮ್ಮ ಮತ್ತು ಮೀರಾ ನಾಡಿಗ್ ಪ್ರಾರ್ಥಿಸಿದರು, ಬಸವರಾಜ್ ಹರ್ತಿ ಸ್ವಾಗತಿಸಿದರು, ಸುಜಾತ ಪ್ರಾಣೇಶ್ ನಿರೂಪಿಸಿದರು, ವಿನಾಯಕ ವಂದಿಸಿದರು.
ಎಲ್ಲರ ಸಹಕಾರದೊಂದಿಗೆ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ನಡೆಯಿತು.

Share This Article