ಬೆಂಗಳೂರು.ಜುಲೈ.21: ರಾಜ್ಯಾದ್ಯಂತ ಕಠಿಣ ಅಭಾವ ಪರಿಸ್ಥಿತಿ ತಲೆದೋರಿದ್ದು, ಸಂಕಷ್ಟದಲ್ಲಿರುವ ಅನ್ನದಾತರ ನೆರವಿಗೆ ರಾಜ್ಯ ಸರ್ಕಾರ ತಕ್ಷಣವೇ ಸ್ಪಂದಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಒತ್ತಾಯಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದ ಜಲಾಶಯಗಳು ಹಾಗೂ ಅಣೆಕಟ್ಟುಗಳಲ್ಲಿ ನೀರಿಲ್ಲದೆ ಪರಿಸ್ಥಿತಿ ಭೀಕರವಾಗಿದೆ. ಬಿತ್ತಿದ ಬೀಜಗಳು ಸರಿಯಾಗಿ ಮೊಳಕೆಯೊಡೆಯದೆ ಒಣಗಿ ಹಾಳಾಗಿದ್ದು, ಶೇಕಡಾ 10 ರಷ್ಟೂ ಬೆಳೆ ಸಿಗದಂತಹ ದುಸ್ಥಿತಿ ನಿರ್ಮಾಣವಾಗಿದೆ. ಇಷ್ಟೊಂದು ತೀವ್ರ ಪ್ರಮಾಣದ ಬರ ಆವರಿಸಿದ್ದರೂ ಹಾಲಿ ಸರ್ಕಾರ ಯಾವುದೇ ಮಹತ್ವದ ನಿರ್ಧಾರ ತಳೆಯದೆ ಮೌನಕ್ಕೆ ಶರಣಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಕಷ್ಟದಲ್ಲಿರುವ ರೈತರು ಕೊಂಚ ನಿಟ್ಟುಸಿರು ಬಿಡುವಂತಾಗಲು ಸರ್ಕಾರ ತಕ್ಷಣವೇ ಪ್ರತಿಯೊಬ್ಬ ರೈತನಿಗೆ ಕನಿಷ್ಠ 50 ಸಾವಿರ ರೂಪಾಯಿ ಪರಿಹಾರ ಧನ ಬಿಡುಗಡೆ ಮಾಡಬೇಕು. ಈ ತುರ್ತು ಕಾರ್ಯವನ್ನಾದರೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮುತವರ್ಜಿ ವಹಿಸಿ ಮಾಡಬೇಕೆಂದು ಬಿ.ಎಸ್.ವೈ ಆಗ್ರಹಿಸಿದ್ದಾರೆ.










