Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಚಿತ್ರದುರ್ಗ | ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ. ಪಾಟೀಲ್ ಅವರ 75 ಸ್ವಾತಂತ್ರ್ಯ ಅಮೃತ ಮಹೋತ್ಸವ ದಿನಾಚರಣೆಯ ಸಂದೇಶ

Facebook
Twitter
Telegram
WhatsApp

ಚಿತ್ರದುರ್ಗ : ಸ್ವತಂತ್ರ ಭಾರತದ 75 ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಧ್ವಜಾರೋಹಣ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿ ಇಲ್ಲಿ ಭಾಗವಹಿಸಿರುವ ಎಲ್ಲರಿಗೂ ನನ್ನ ನಮಸ್ಕಾರಗಳು ,

ಸ್ವಾತಂತ್ರ್ಯ ದಿನದ ಅಮೃತ ಮಹೋತ್ಸವವಾದ ಇಂದು ಶೂರರ ನಾಡು , ವೀರ – ವನಿತೆಯರ ಬೀಡು ಚಿತ್ರದುರ್ಗ ಜಿಲ್ಲೆಯ ಸಮಸ್ತ ತಂದೆ – ತಾಯಂದಿರಿಗೆ , ಅಕ್ಕ – ತಂಗಿಯರಿಗೆ , ಅಣ್ಣ – ತಮ್ಮಂದಿರಿಗೆ , ನಾಡಿನ ಶಕ್ತಿ ನಮ್ಮೆಲ್ಲ ರೈತ ಬಾಂಧವರಿಗೆ , ಈ ದೇಶದ ಭವಿಷ್ಯ ಎನಿಸಿರುವ ಎಲ್ಲಾ ಯುವಕರಿಗೆ ಸ್ವಾತಂತ್ರ್ಯ ಅಮೃತ ಮಹೋತ್ಸವದ ಹಾರ್ಧಿಕ ಶುಭಾಶಯಗಳು .

ಸಮವಸ್ತ್ರ ಧರಿಸಿ ದೇಶಭಿಮಾನ ಉಕ್ಕಿಸುವ ಸುಶ್ರಾವ್ಯ ಕವಾಯಿತು ವಾದ್ಯಕ್ಕೆ ಶಿಸ್ತುಬದ್ಧವಾಗಿ ಹೆಜ್ಜೆ ಹಾಕಿದ ಎಲ್ಲ ತಂಡಗಳ ಸದಸ್ಯರಿಗೆ ಕರ್ನಾಟಕ ಘನ ಸರ್ಕಾರದ ಪರವಾಗಿ , ಜಿಲ್ಲಾಡಳಿತದ ಪರವಾಗಿ ಮತ್ತು ಇಲ್ಲಿ ನೆರೆದಿರುವ ಎಲ್ಲರ ಪರವಾಗಿ ಅಭಿನಂದನೆಗಳು ,

ಧ್ವಜ ವಂದನೆಯ ಈ ಕವಾಯಿತಿನಲ್ಲಿ ತಾವು ಹಾಕಿದ ಹೆಜ್ಜೆಗಳು , ನಿಜಕ್ಕೂ ನಮ್ಮ ದೇಶ ಕಳೆದ ಎಪ್ಪತ್ತೈದು ವರ್ಷಗಳಲ್ಲಿ ನಡೆದು ಬಂದ ಶಿಸ್ತುಬದ್ಧ ಅಭಿವೃದ್ಧಿಯ ಸಾಂಕೇತಿಕ ಪ್ರದರ್ಶನವಾಗಿತ್ತು . ವಿವಿಧ ತಂಡಗಳಲ್ಲಿ ಪಾಲ್ಗೊಂಡಿರುವ ಎಲ್ಲ ವಯೋಮಾನದ ಸದಸ್ಯರುಗಳಿಗೆ ನನ್ನ ಹಾರ್ದಿಕ ಅಭಿನನಂದನೆಗಳು.

ಬಂಧುಗಳೇ , ಪ್ರತಿ ವರ್ಷ ಅಗಸ್ಟ್ 15 , ನಮ್ಮ ದೇಶದ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದ ಮಹತ್ವದ ದಿನ . ದಾಸ್ಯದ ಕತ್ತಲೆ ಕಳೆದು ಸ್ವಾತಂತ್ರ್ಯ , ಸ್ವಾಭಿಮಾನದ ಬದುಕಿಗೆ ಬೆಳಕಾದ ದಿನ . ಜಗತ್ತಿನ ಇತಿಹಾಸದಲ್ಲೇ ಮಹತ್ವದ ಸ್ಥಾನ ಪಡೆದಿರುವ ಈ ನಮ್ಮ ಭರತ ಖಂಡ , ಸಹಸ್ರಾರು ವರ್ಷಗಳ ಕಾಲ ರಾಜ ಮಹಾರಾಜರುಗಳ , ಚಕ್ರವರ್ತಿಗಳ ಮತ್ತು ಸ್ಥಳೀಯ ಸಣ್ಣ ಸಣ್ಣ ಪಾಳೇಗಾರರುಗಳ ಆಳ್ವಿಕೆಯಲ್ಲಿ ನಡೆದು ಬಂದು , ನಂತರದ ಕಾಲಘಟ್ಟಗಳಲ್ಲಿ ಪರಕೀಯರ ಆಳ್ವಿಕೆಗೆ ತುತ್ತಾಗಿ , 20 ನೇ ಶತಮಾನದ ಅರ್ಧ ಭಾಗದ ಹೊತ್ತಿಗೆ , ಲಕ್ಷಾಂತರ ಜನ ಸ್ವಾತಂತ್ರ ಹೋರಾಟಗಾರರ ತ್ಯಾಗ ಬಲಿದಾನಗಳ ಫಲಶೃತಿಯಾಗಿ ಗಳಿಸಿದ ಸ್ವಾತಂತ್ರ್ಯದ 75 ನೇ ಮಹೋತ್ಸವದ ವಿಶೇಷ ದಿನ . ಈ ದಿನಕ್ಕೆ ಸಾಕ್ಷಿಯಾಗಿರುವ ನಮ್ಮ ನಿಮ್ಮಗಳ ಸೌಭಾಗ್ಯದ ಕ್ಷಣ , ಈ ಸಂಭ್ರಮವನ್ನು ಆಜಾಧಿ ಕಾ ಅಮೃತ ಮಹೋತ್ಸವ ” ಎಂದಾಗಿ ಆಚರಿಸುತ್ತಿರುವುದು ನಮ್ಮೆಲ್ಲರ ದೇಶಭಿಮಾನದ , ರಾಷ್ಟ್ರ ಭಕ್ತಿಯ ಸಂಕೇತ .

ಪ್ರಜಾಪ್ರಭುತ್ವ ವ್ಯವಸ್ಥೆಯಂತಹ ಒಂದು ಸುಂದರ ಆಡಳಿತ ಅವಕಾಶವನ್ನು ನಮ್ಮ ಸ್ವಾತಂತ್ರ್ಯ ಚಳವಳಿಯ ಹರಿಕಾರರು ನಮಗೆ ಕಟ್ಟಿಕೊಟ್ಟಿದ್ದಾರೆ . ಅವರ ಬೆವರು ಮತ್ತು ರಕ್ತ ತರ್ಪಣಗಳಿಂದಾಗಿಯೇ ಇವತ್ತು ನಾವು ಸಮೃದ್ಧ ಮತ್ತು ಶಾಂತಿಯುತ ಜೀವನ ನಡೆಸುವಂತಾಗಿದೆ . ಸಾಮರಸ್ಯದ ನಡೆಗೆ ಪ್ರೇರಣೆಯಾಗಿದೆ . ಜಗತ್ತಿನ ಜನ ಹುಬ್ಬೇರಿಸುವಂತೆ ಪ್ರಗತಿ ಪಥದಲ್ಲಿ ಸಾಗಲು ಸಾಧ್ಯವಾಗಿದೆ . ಇಂತಹ ದಿಗ್ಗಜರುಗಳ ಹೆರುಗಳನ್ನು ಪಟ್ಟಿ ಮಾಡುತ್ತಾ ಹೋದರೆ , ಅದು ಭಾರತದಷ್ಟೇ ಬೃಹತ್ ಪಟ್ಟಿಯಾಗುತ್ತದೆ . ನವದೆಹಲಿಯ ಐತಿಹಾಸಿಕ ಕಲ್ಲಿಕೋಟೆಯ ಮೇಲೆ ಮೊದಲ ಸ್ವಾತಂತ್ರೋತ್ಸವದ ತ್ರಿವರ್ಣ ಧ್ವಜವನ್ನು ಹಾರಿಸುವ ಗಳಿಗೆಯವರೆಗೆ ನಡೆದ ಎಲ್ಲ ಘಟನೆಗಳೂ , ಪ್ರಯತ್ನಗಳೂ ರಾಷ್ಟ್ರೀಯ ಚಳವಳಿಯ ಭಾಗಗಳೇ ಆಗಿವೆ .

ಸ್ವಾತಂತ್ರ್ಯ ಹೋರಾಟದ ಕಾಲಗತಿಯಲ್ಲಿ ಹುತಾತ್ಮ , ಮಹಾತ್ಮರುಗಳು ಮಾಡಿರುವ ತ್ಯಾಗ ಬಲಿದಾನಗಳು ಜನಮಾನಸದಿಂದ ಮರೆಯಾಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ . ಸ್ವಾತಂತ್ರ್ಯ ಬಂದಾಗ ನಮ್ಮ ದೇಶದ ಒಟ್ಟು ಜನಸಂಖ್ಯೆ ಸರಿಸುಮಾರು ಮೂವತ್ತೆಂಟು ಕೋಟಿ . ಇವತ್ತು ಅದಕ್ಕೆ ಒಂದುನೂರು ಕೋಟಿಯಷ್ಟು ಜನಸಂಖ್ಯೆ ಸೇರಿ ನೂರಾ ಮೂವತ್ತೆಂಟು ಕೋಟಿ ಆಗಿದೆ . ಭಾರತೀಯರಾದ ನಮಗೆ ಇದೊಂದು ಬಹುದೊಡ್ಡ ಸವಾಲು ಮತ್ತು ಆ ಸವಾಲನ್ನು ಮೀರಿ ಬೆಳೆಯುವ ಅವಕಾಶ , ಭೂ ವಿಸ್ತಾರದಲ್ಲಿ ಯಾವುದೇ ಹೆಚ್ಚಳವಿಲ್ಲದೆ , ಈ ಒಂದು ನೂರು ಕೋಟಿಯಷ್ಟು ಹೆಚ್ಚುವರಿ ಜನಸಂಖ್ಯೆಗೆ ಅನ್ನ , ನೀರು , ವಸತಿ , ಆರೋಗ್ಯ , ನಾಗರಿಕ ಸೌಲಭ್ಯಗಳು ಮತ್ತು ಸಾಮಾಜಿಕ ಭದ್ರತೆ ಒದಗಿಸುವ ಕೆಲಸ ಸಾಮಾನ್ಯ ಸಾಧನೆಯಲ್ಲ . ಜಗತ್ತಿನ ಇತರ ರಾಷ್ಟ್ರಗಳ ಜನರ ಜನಜೀವನ ಮಟ್ಟಕ್ಕಿಂತ ಕಡಿಮೆಯಾಗದಂತೆ ದೇಶವನ್ನು ಮುನ್ನಡೆಸುವ ಜವಾಬ್ದಾರಿ ಸುಲಭದ ಮಾತಲ್ಲ . ಕಳೆದ ಏಳೂವರೆ ದಶಕಗಳಲ್ಲಿ ರಾಷ್ಟ್ರೀಯ ವರಮಾನ ಹಲವು ಪಟ್ಟು ಹೆಚ್ಚಾಗಿದೆ . ವಿಜ್ಞಾನ ತಂತ್ರಜ್ಞಾನ ಕ್ಷೇತ್ರದಲ್ಲಿ ಗಣನೀಯ ಅಭಿವೃದ್ಧಿಯಾಗಿದೆ . ಆರ್ಥಿಕ ಅಭಿವೃದ್ಧಿಗೆ ಬೇಕಾದ ಮೂಲ ಸೌಲಭ್ಯಗಳು ಜನಸಂಖ್ಯಾ ಏರಿಕೆಯ ದರಕ್ಕಿಂತ ಹಲವು ಪಟ್ಟು ಹೆಚ್ಚಾಗುತ್ತಾ ಬಂದಿದೆ . ಬಡತನ , ನಿರುದ್ಯೋಗ , ಅಸಮಾನತೆಗಳು ಕಡಿಮೆಯಾಗಿವೆ . ಜೀವಿತದ ಸರಾಸರಿ ಅವಧಿ ಗಣನೀಯವಾಗಿ ಹೆಚ್ಚಾಗಿದೆ . ಬಹುತೇಕ ಎಲ್ಲ ಹಳ್ಳಿಗಳಿಗೂ ಸಾರಿಗೆ ಸಂಪರ್ಕ ಸುವ್ಯವಸ್ಥಿತವಾಗಿ ನಿರ್ಮಾಣವಾಗಿದೆ . ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುತ್ತಿದೆ . ದೇಶದ ರಕ್ಷಣಾ ವ್ಯವಸ್ಥೆ ಸುಸ್ಥಿರವಾಗಿದೆ . ಆಹಾರ , ಆರೋಗ್ಯ ಮತ್ತು ಸಾಮಾಜಿಕ ಭದ್ರತೆಗಳು ದೇಶದ ಕಟ್ಟಕಡೆಯ ವ್ಯಕ್ತಿಗೆ ತಲುಪುತ್ತಿರುವುದನ್ನು ಕಣ್ಣಾರೆ ಕಾಣುತ್ತಿದ್ದೇವೆ . ಜಾತಿ ವ್ಯವಸ್ಥೆ ಮೂಲದ ಶೋಷಣೆಯ ತೀವ್ರತೆ ಕಡಿಮೆಯಾಗಿದೆ . ಇದೆಲ್ಲವನ್ನ ಮಷೀಕರಿಸುವಂತೆ , ಇವತ್ತು ಕೋವಿಡ್ -19 ರ ಮಹಾ ದುಃಸ್ಥಿತಿಯನ್ನು ಹೆಚ್ಚಿನ ಸಾವು ನೋವುಗಳಿಲ್ಲದೆ ನಿರ್ವಹಿಸುವಂತಹ ಶಕ್ತಿ ನಮಗೆ ಬಂದಿರುವುದು ನಮ್ಮ ಆಡಳಿತ ವ್ಯವಸ್ಥೆಯ ದೂರದೃಷ್ಟಿ , ಸಂಶೋಧನಾ ಸಾಮರ್ಥ್ಯ , ಸಾಮಾಜಿಕ ಬದ್ಧತೆ ಮತ್ತು ಸಾಮೂಹಿಕ ಪ್ರಯತ್ನ . ಜೊತೆಗೆ , ಸಂವಿಧಾನದ ನಾಲ್ಕನೇ ಅಂಗ ಎಂದು ಪರಿಗಣಿಸಲ್ಪಟ್ಟಿರುವ ಸಮೂಹ ಮಾಧ್ಯಮ ಕ್ಷೇತ್ರ ತಂತ್ರಜ್ಞಾನದ ಬೆಳವಣಿಗೆಯ ಕಾರಣದಿಂದ ಅತ್ಯಂತ ಕ್ರಿಯಾಶೀಲವಾಗಿರುವುದು . ಜನಸಾಮಾನ್ಯರ ಸಮಸ್ಯೆಗಳನ್ನು ಕ್ಷಣಮಾತ್ರದಲ್ಲಿ ಜನಮಾನಸಕ್ಕೆ ಮುಟ್ಟಿಸುವ ಕೆಲಸವನ್ನು ಅವು ತಮ್ಮ ಹೊಣೆಗಾರಿಕೆಯನ್ನರಿತು ಅತ್ಯಂತ ಅಚ್ಚುಕಟ್ಟಾಗಿ ಮಾಡುತ್ತಿವೆ . ಇದರಿಂದ ಶಾಸಕಾಂಗ ಮತ್ತು ಕಾರ್ಯಾಂಗಗಳು ದಾರಿ ತಪ್ಪದಂತೆ , ಎಚ್ಚರಿಕೆಯ ಹೆಜ್ಜೆಗಳನ್ನಿಡುವಂತಾಗಿದೆ . ಇದೇ ಪ್ರಜಾಪ್ರಭುತ್ವ ವ್ಯವಸ್ಥೆಯ ಸೌಂದರ್ಯ ಮತ್ತು ಸಾರ್ವಜನಿಕ ಆಡಳಿತದ ಸರಿದಾರಿ , ಮುಂದುವರಿದು ಹೇಳುವುದಾದರೆ , ಪ್ರಸ್ತುತ ನಮ್ಮ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು , ಈ ಅಮೃತ ಮಹೋತ್ಸವವನ್ನು ಆಚರಿಸುವ ಅವಕಾಶವೇ ಒಂದು ಸುದೈವವೆಂದು ಭಾವಿಸಿದ್ದೇವೆ . ಇದರ ಸವಿ ನೆನಪಿಗಾಗಿ ರಾಷ್ಟ್ರದ ಏಕತೆ , ಸಮಗ್ರತೆ ಮತ್ತು ಸಂವಿಧಾನಿಕ ಮೌಲ್ಯಗಳನ್ನು ಎತ್ತಿ ಹಿಡಿಯುವ ಹಲವು ಹತ್ತು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ . ಈ ಮಹೋತ್ಸವದ ಮಹತ್ವವನ್ನು ದೇಶದ ಪ್ರತಿಯೊಬ್ಬ ನಾಗರಿಕನಿಗೂ ತಲುಪಿಸುವ ಮೂಲಕ ಅವರಲ್ಲಿ ದೇಶಾಭಿಮಾನ ಮತ್ತು ಪರಿಪೂರ್ಣ ನಾಗರಿಕ ಪ್ರಜ್ಞೆಯನ್ನು ಬೆಳೆಸುವ ಉದ್ದೇಶ ನಮ್ಮದಾಗಿದೆ . ಬರುವ ದಶಕಗಳಲ್ಲಿ ಭಾರತವನ್ನು ” ವಿಶ್ವಗುರುವನ್ನಾಗಿಸುವ ಮಹಾತ್ವಾಕಾಂಕ್ಷೆ ಹೊಂದಿದ್ದೇವೆ . ರಾಷ್ಟ್ರ ಮತ್ತು ರಾಜ್ಯಮಟ್ಟದಲ್ಲಿ . ಬಹುತೇಕ ಎಲ್ಲ ಇಲಾಖೆಗಳ ಮೂಲಕ ಹಲವಾರು ವೈವಿಧ್ಯಪೂರ್ಣ ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಾಗಿದೆ . ಅವುಗಳಲ್ಲಿ ಮುಖ್ಯವಾಗಿ , ಮೂಲ ಸೌಲಭ್ಯಗಳ ನಿರ್ಮಾಣಕ್ಕಾಗಿ ಒತ್ತು ಕೊಟ್ಟಂತೆ ‘ ಗತಿ ಶಕ್ತಿ ” ಯೋಜನೆ , ಉದ್ಯೋಗ ಮತ್ತು ಸಂಪತ್ತು ಸೃಷ್ಟಿಗಾಗಿ ” ಆತ್ಮ ನಿರ್ಭರ ಭಾರತ ” ಯೋಜನೆ, ಸ್ವಾವಲಂಭಿ ಭಾರತ ನಿರ್ಮಾಣಕ್ಕಾಗಿ ‘ ಮೇಕ್ ಇನ್ ಇಂಡಿಯಾ ‘ ಮುಂತಾದ ಕಾರ್ಯಕ್ರಮಗಳನ್ನು ಸಬ್ ಕಾ ಸಾತ್ ಸಬ್ ಕಾ ವಿಕಾಸ್ ‘ , ‘ ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್ ” ಮತ್ತು “ಸಬ್ ಕಾ ವಿಶ್ವಾಸ್ ಸಬ್ ಕ ಪ್ರಯಾಸ್ ” ತತ್ತ್ವಗಳಡಿಯಲ್ಲಿ ಯಶಸ್ವಿಯಾಗಿ ಜಾರಿಗೊಳಿಸುತ್ತಿದ್ದೇವೆ.

ಕೃಷಿ , ಕೈಗಾರಿಕೆ ಮತ್ತು ಸೇವಾ ವಲಯಗಳಲ್ಲಿ ಈ ಎಲ್ಲ ಕಾರ್ಯಕ್ರಮಗಳನ್ನು ವರ್ಷ ಪೂರ್ತಿ , ಅಂದರೆ ಬರುವ ಆಗಸ್ಟ್ 15 , 2023 ರವರೆಗೆ ನಿರಂತರವಾಗಿ ನಡೆಸುವುದು ಸರ್ಕಾರದ ಉದ್ದೇಶವಾಗಿದೆ .

ಈ ಕಾರ್ಯಕ್ರಮಗಳು ನಿರೀಕ್ಷಿತ ಯಶಸ್ಸು ಕಾಣುವಂತಾಗಲು ಪರಿಶೀಲನೆಗಾಗಿ ಲಭ್ಯವಿರುವ ಎಲ್ಲ ತಾಂತ್ರಿಕ ಸೌಲಭ್ಯಗಳನ್ನು ಬಳಸಲು ಸರ್ಕಾರ ತೀರ್ಮಾನಿಸಿದೆ . ಕರ್ನಾಟಕ ಘನ ಸರ್ಕಾರ ಕೂಡ ಕೇಂದ್ರ ಸರ್ಕಾರದ ನಿರ್ದೇಶನದಂತೆ ‘ ಹರ್ ಫರ್ ತಿರಂಗಾ ” ಕಾರ್ಯಕ್ರಮದ ಪ್ರಕಾರ ರಾಜ್ಯದ ಎಲ್ಲ ಮನೆಗಳ , ಶಾಲಾ ಕಾಲೇಜುಗಳ , ಅಂಗಡಿ ಮುಂಗಟ್ಟುಗಳ ಮೇಲೆ ರಾಷ್ಟ್ರ ಧ್ವಜವನ್ನು ಹಾರಿಸುವ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಕ್ರಮವಹಿಸಲಾಗಿದೆ . ದೇಶದ ಎಲ್ಲ ನಾಗರಿಕರನ್ನು ದೇಶಾಭಿಮಾನದ ಕಡೆಗೆ ಭಾವನಾತ್ಮಕವಾಗಿ ಸ್ಪಂಧಿಸುವಂತೆ ಮಾಡಲು , ಮತ್ತು ಸನಾತನ ಭಾರತದ ಸಾಹಿತ್ಯ , ಕಲೆ , ವಾಸ್ತುಶಿಲ್ಪ ಮುಂತಾದ ಐತಿಹಾಸಿಕ ಸ್ಮಾರಕಗಳ ಪ್ರಾಮುಖ್ಯತೆಯನ್ನರಿಯಲು ಅನುಕೂಲವಾಗುವಂತೆ , ಈ ಸ್ಥಳಗಳನ್ನು ವಿದುದ್ದೀಪಾಲಂಕಾರಗಳಿಂದ ಸಜ್ಜುಗೊಳಿಸಿ ಯಾವುದೇ ಪ್ರವೇಶ ಶುಲ್ಕವಿಲ್ಲದಂತೆ ಸಾರ್ವಜನಿಕರಿಗೆ ಇದೇ 5 ನೇ ತಾರೀಖಿನಿಂದ 17 ನೇ ತಾರೀಖಿನವರೆಗೆ ಮುಕ್ತ ಪ್ರವೇಶ ವ್ಯವಸ್ಥೆ ಮಾಡಲಾಗಿದೆ . ಇದು ಚಿತ್ರದುರ್ಗ ಜಿಲ್ಲೆಯಲ್ಲಿ ಅತ್ಯಂತ ಯಶಸ್ವೀ ಕಾರ್ಯಕ್ರಮವಾಗಿ ಜಾರಿಯಾಗಿದ್ದು , ಪ್ರತಿದಿನ ಸಹಸ್ರಾರು ಜನರು ಈ ಸ್ಥಳಗಳಿಗೆ ಭೇಟಿ ನೀಡುತ್ತಿರುವುದಲ್ಲದೆ ಸಾಮಾಜಿಕ ಜಾಲತಾಣದಲ್ಲಿ ಅತ್ಯಂತ ಪ್ರಶಂಸೆಗೆ ಭಾಜನವಾಗಿರುವುದು ಜಿಲ್ಲಾಡಳಿತದ ಪ್ರಯತ್ನಗಳಿಗೆ ಸಂದ ಗೌರವವಾಗಿದೆ . ಅದರಲ್ಲೂ ಚಿತ್ರದುರ್ಗದ ಕೋಟೆಯ ಸೌಂದರ್ಯ ಮನಮೋಹಕವಾಗಿದೆ . ಕೊನೆಯದಾಗಿ , ಇಲ್ಲಿ ಉಪಸ್ಥಿತರಿರುವ ಎಲ್ಲ ಬಂಧುಗಳೇ , ನಮ್ಮೆಲ್ಲರ ಉದ್ದೇಶ ಬರುವ ದಶಕಗಳಲ್ಲಿ ದೇಶದ ಪ್ರತಿಯೊಬ್ಬರಿಗೂ ತಕ್ಕ ಶಿಕ್ಷಣ , ಎಲ್ಲ ಯುವಕರಿಗೆ ಉದ್ಯೋಗ , ಎಲ್ಲರಿಗೂ ಅವರವರದೇ ಆದ ಗೌರವಾನ್ವಿತ ಸಾಮಾಜಿಕ ಸ್ಥಾನ ಮಾನಗಳು , ಭವಿಷ್ಯದ ಅಗತ್ಯಗಳಿಗೆ ಅನುಕೂಲವಾಗುವಂತೆ ಪರಿಸರ ಸಂರಕ್ಷಣೆ , ರೈತರೂ ಒಳಗೊಂಡಂತೆ ಎಲ್ಲ ವರ್ಗ ಮತ್ತು ವಲಯಗಳ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ , ವಿಶೇಷವಾಗಿ ಮಹಿಳೆಯರ ಮತ್ತು ಮಕ್ಕಳ ಕಲ್ಯಾಣ ನಮ್ಮ ಆದ್ಯತೆಯ ಕಾರ್ಯಕ್ರಮಗಳಾಗಿವೆ . ನಮ್ಮ ಸಂವಿಧಾನವೇ ನಮಗೆ ಮೊದಲ ಧರ್ಮ ಗ್ರಂಥವಾಗಿ , ಅದರ ಬೆಳಕಿನಲ್ಲಿ ನಾವು ಒಟ್ಟಾಗಿ ಬಾಳುವ ಮೂಲಕ ಜಗತ್ತಿಗೆ ಮಾದರಿಯಾಗೋಣ ಮತ್ತು ಅಮೃತ ಮಹೋತ್ಸವದ ಆಶಯಕ್ಕೆ ಅರ್ಥ ಬರುವಂತೆ ಬಾಳೋಣ ಎಂದು ಹೇಳುತ್ತಾ , ಈ ಕಾರ್ಯಕ್ರಮಕ್ಕೆ ಶ್ರಮಿಸಿದ ಎಲ್ಲರಿಗೂ ವಂದನೆಗಳನ್ನು ಸಲ್ಲಿಸಿ ನನ್ನ ಮಾತುಗಳನ್ನು ಮುಗಿಸುತ್ತೇನೆ .

# ಜೈ ಹಿಂದ್, ಜೈ ಕರ್ನಾಟಕ, ಜೈ ಕಿಸಾನ್.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಜೆಇಇ” ಮೈನ್ಸ್‌ ಫಲಿತಾಂಶ | ಆಲ್‌ ಇಂಡಿಯಾ ರ್ಯಾಂಕ್‌ ಪಡೆದು ದಾಖಲೆ ನಿರ್ಮಿಸಿದ ಚಿತ್ರದುರ್ಗದ ʼಎಸ್‌ ಆರ್‌ ಎಸ್‌ʼ ವಿದ್ಯಾರ್ಥಿಗಳು

ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್.25 :  ನಗರದ ಎಸ್‌ ಆರ್‌ ಎಸ್‌ ಪಿಯು ಕಾಲೇಜಿನ ವಿದ್ಯಾರ್ಥಿಗಳು ಇದೇ ಏಪ್ರಿಲ್‌ ತಿಂಗಳಲ್ಲಿ ನಡೆದ “ಜೆಇಇ ಮೈನ್ಸ್‌”ನ (ರಾಷ್ಟ್ರೀಯ ಅರ್ಹತಾ ಪರೀಕ್ಷೆ) ಎರಡನೇ ಸ್ಲಾಟ್‌ ಪರೀಕ್ಷೆಯಲ್ಲಿ ಕಾಲೇಜಿನ ವಿದ್ಯಾರ್ಥಿ

ಮತದಾನಕ್ಕೂ ಮುನ್ನ ಅರ್ಥ ಪೂರ್ಣ ಟ್ವೀಟ್ ಮಾಡಿದ ಸುಮಲತಾ : ನೆಟ್ಟಿಗರಿಂದ ಪ್ರಶ್ನೆಗಳ ಸುರಿಮಳೆ

  ಲೋಕಸಭಾ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದೆ. ದಿನ ಬೆಳಗಾಗುವುದರೊಳಗೆ ಚುನಾವಣೆ ಬರಲಿದೆ. ನಾಳೆ ಬೆಳಗ್ಗೆ 7 ಗಂಟೆಯಿಂದಾನೆ ಮತದಾನ ಆರಂಭವಾಗಲಿದೆ. ಹದಿನಾಲ್ಕು ಕ್ಷೇತ್ರಗಳಿಗೆ ಚುನಾವಣೆ ಮಡೆಯಲಿದ್ದು, ಭದ್ರತೆಯೂ ಸಿದ್ಧವಾಗಿದೆ. ಈ ಬಾರಿಯ ಚುನಾವಣೆಯಲ್ಲೂ ಮಂಡ್ಯ

JEE MAIN 2024 : ಉತ್ತಮ ಸಾಧನೆ ಮಾಡಿದ ವೇದ ಪಿಯು ಕಾಲೇಜಿನ ವಿದ್ಯಾರ್ಥಿಗಳು

  ಸುದ್ದಿಒನ್, ಚಳ್ಳಕೆರೆ, ಏಪ್ರಿಲ್. 25 : ವಾರ್ಷಿಕ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆಯ ಫಲಿತಾಂಶದೊಂದಿಗೆ JEE MAINS ನಲ್ಲೂ  ಮೂರು  ADVANCE ಗೆ ಅರ್ಹತೆ ಪಡೆದುಕೊಂಡಿದ್ದಾರೆ ವೇದ ಪಿಯು ಕಾಲೇಜಿನ ವಿದ್ಯಾರ್ಥಿಗಳು. ತಾಲೂಕು ಸಾಣಿಕೆರೆಯ

error: Content is protected !!