ಪಶ್ಚಿಮ ಬಂಗಾಳದಲ್ಲಿ ರೈಲು ಹಳಿತಪ್ಪಿ 5 ಮಂದಿ ಸಾವು, 45 ಮಂದಿಗೆ ಗಾಯ

suddionenews
2 Min Read

ಜಲ್ಪೈಗುರಿ, ಪಶ್ಚಿಮ ಬಂಗಾಳ: ಉತ್ತರ ಬಂಗಾಳದಲ್ಲಿ ರೈಲು ಅಪಘಾತದಲ್ಲಿ ಅನೇಕ ಪ್ರಯಾಣಿಕರು ಅವಶೇಷಗಳಲ್ಲಿ ಸಿಲುಕಿರುವ ರೈಲು ದುರಂತ ಸಂಭವಿಸಿದೆ.

ಗುವಾಹಟಿ-ಬಿಕಾನೇರ್ ಎಕ್ಸ್‌ಪ್ರೆಸ್ ರೈಲಿನ 12 ಬೋಗಿಗಳು ಇಂದು ಪಶ್ಚಿಮ ಬಂಗಾಳದ ಜಲ್ಪೈಗುರಿ ಜಿಲ್ಲೆಯ ಮೇನಾಗುರಿ ಪಟ್ಟಣದ ಬಳಿ ಹಳಿತಪ್ಪಿದವು. ಕನಿಷ್ಠ ಐದು ಜನರು ಸಾವನ್ನಪ್ಪಿದ್ದಾರೆ ಮತ್ತು 45 ಮಂದಿ ಗಾಯಗೊಂಡಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ತಿಳಿಸಿದೆ.

ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಇಂದು ರಾತ್ರಿ ಅಪಘಾತ ಸ್ಥಳಕ್ಕೆ ಭೇಟಿ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಹಳಿತಪ್ಪಿದ ಕೋಚ್‌ಗಳಿಂದ ಕನಿಷ್ಠ 40 ಜನರನ್ನು ರಕ್ಷಿಸಲಾಗಿದೆ, 24 ಜನರನ್ನು ಜಲ್ಪೈಗುರಿ ಜಿಲ್ಲಾ ಆಸ್ಪತ್ರೆಗೆ ಮತ್ತು 16 ಜನರನ್ನು ಮೊಯ್ನಗುರಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸುಮಾರು 10 ಜನರ ಸ್ಥಿತಿ ಗಂಭೀರವಾಗಿದ್ದು, ಸಿಲಿಗುರಿಯ ಉತ್ತರ ಬಂಗಾಳ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗುವುದು ಎಂದು ನ್ಯೂ ಫ್ರಾಂಟಿಯರ್ ರೈಲ್ವೆ ಮೂಲಗಳು ತಿಳಿಸಿವೆ.

ಹಳಿತಪ್ಪಿದ ಕೋಚ್‌ಗಳಲ್ಲಿ ಹಲವು ಪ್ರಯಾಣಿಕರು ಸಿಲುಕಿರುವ ಶಂಕೆ ವ್ಯಕ್ತವಾಗಿದ್ದು, ಗ್ಯಾಸ್ ಕಟ್ಟರ್‌ಗಳನ್ನು ಬಳಸಿ ನುಜ್ಜುಗುಜ್ಜಾಗಿರುವ ಕೋಚ್‌ಗಳನ್ನು ತೆರವುಗೊಳಿಸುತ್ತಿದ್ದಾರೆ ಎಂದು ರೈಲ್ವೇ ಮೂಲಗಳು ತಿಳಿಸಿವೆ.

ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರು ಪರಿಸ್ಥಿತಿಯನ್ನು “ವೈಯಕ್ತಿಕವಾಗಿ” ಗಮನಿಸುತ್ತಿದ್ದಾರೆ ಮತ್ತು ಅವರು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ  ಮಾತನಾಡಿ ರಕ್ಷಣಾ ಕಾರ್ಯಾಚರಣೆಗಳ ಬಗ್ಗೆ ತಿಳಿಸಿದ್ದಾರೆ.

ಈ ದುರದೃಷ್ಟಕರ ಅಪಘಾತದಲ್ಲಿ, ಇಂದು ಸಂಜೆ ನ್ಯೂ ಮೇನಗುರಿ (ಪಶ್ಚಿಮ ಬಂಗಾಳ) ಬಳಿ ಬಿಕಾನೇರ್ – ಗುವಾಹಟಿ ಎಕ್ಸ್‌ಪ್ರೆಸ್‌ನ 12 ಕೋಚ್‌ಗಳು ಹಳಿತಪ್ಪಿದವು. ತ್ವರಿತ ರಕ್ಷಣಾ ಕಾರ್ಯಾಚರಣೆಗಾಗಿ ಪರಿಸ್ಥಿತಿಯನ್ನು ವೈಯಕ್ತಿಕವಾಗಿ ಮೇಲ್ವಿಚಾರಣೆ ಮಾಡಲಾಗುತ್ತಿದೆ” ಎಂದು ಅವರು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ನ್ಯೂ ದೋಮೊಹನಿ ಮತ್ತು ನ್ಯೂ ಮೇನಗುರಿ ರೈಲು ನಿಲ್ದಾಣಗಳ ನಡುವೆ ಗುರುವಾರ ಸಂಜೆ 5 ಗಂಟೆ ಸುಮಾರಿಗೆ ರೈಲು ಹಳಿತಪ್ಪಿತು. ರೈಲ್ವೆ ಮತ್ತು ಜಿಲ್ಲಾಡಳಿತ ಅಧಿಕಾರಿಗಳು ರಕ್ಷಣಾ ಮತ್ತು ಪರಿಹಾರ ಕಾರ್ಯದಲ್ಲಿ ತೊಡಗಿದ್ದಾರೆ.

ರೈಲು ನಿನ್ನೆ ಬಿಕಾನೇರ್ ಜಂಕ್ಷನ್‌ನಿಂದ ಹೊರಟಿದ್ದು, ಇಂದು ಸಂಜೆ ಗುವಾಹಟಿ ತಲುಪಬೇಕಿತ್ತು.

ಗುವಾಹಟಿ-ಬಿಕಾನೇರ್ ಎಕ್ಸ್‌ಪ್ರೆಸ್ 15633 ಹಳಿತಪ್ಪಿದ ಸಂದರ್ಭದಲ್ಲಿ ಉನ್ನತ ಮಟ್ಟದ ರೈಲ್ವೆ ಸುರಕ್ಷತಾ ತನಿಖೆಗೆ ಆದೇಶಿಸಲಾಗಿದೆ; ರೈಲ್ವೆ ಸಹಾಯವಾಣಿ ಸಂಖ್ಯೆಗಳು – 03612731622, 03612731623: ಭಾರತೀಯ ರೈಲ್ವೆ

Share This Article
Leave a Comment

Leave a Reply

Your email address will not be published. Required fields are marked *