ಜೆಡಿಎಸ್ ಶಾಸಕ ಶಿವಲಿಂಗೇಗೌಡ ವಿರುದ್ಧ 200 ಕೋಟಿ ನುಂಗಿದ ಆರೋಪ..!
ಬೆಂಗಳೂರು: ಹಾಸನ ಜಿಲ್ಲೆ ಅರಸೀಕೆರೆ ವಿಧಾನಸಭಾ ಕ್ಷೇತ್ರದ ಎರಡು ಯೋಜನೆಯಲ್ಲಿ ಭ್ರಷ್ಟಾಚಾರ ನಡೆದಿದೆ. 200 ಕೋಟಿಗೂ ಅಧಿಕ ಹಣ ಭ್ರಷ್ಟಾಚಾರ ಆಗಿದೆ ಎಂದು ಬಿಜೆಪಿ ಮುಖಂಡ ಎನ್ ಆರ್ ರಮೇಶ್ ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ.
ಭ್ರಷ್ಟಾಚಾರ ಸಂಬಂಧ ದಾಖಲೆಗಳನ್ನು ಒದಗಿಸಿರುವ ರಮೇಶ್, ಅರಸೀಕೆರೆ ಶಾಸಕ ಶಿವಲಿಂಗೇಗೌಡ ಹಾಗೂ ಅಧಿಕಾರಿಗಳ ಹೆಸರನ್ನು ಸೂಚಿಸಿದ್ದಾರೆ. ಎತ್ತಿನ ಹೊಳೆಯ ಕುಡಿಯುವ ನೀರಿನ ಯೋಜನೆಗೆ ಕಳೆದ ಮೂರು ವರ್ಷದಲ್ಲಿ ಕೋಟಿ ಕೋಟಿ ಬಿಡುಗಡೆಯಾಗಿದೆ. ಆದರೆ ಐದು ಕೋಟಿ ಯೋಜನೆಗೆ ಟೆಂಡರ್ ಕರೆಯದೆಯೇ ಏಕಾಏಕಿ ಕೆಲಸ ಆರಂಭ ಮಾಡಿದ್ದಾರೆ. ಕೆಲವು ರಸ್ತೆಗಳು ಸರಿಯಿದ್ದರೂ ಮತ್ತೆ ಅದೇ ರಸ್ತೆಗೆ ಕಾಂಕ್ರೀಟ್ ಹಾಕಲಾಗಿದೆ. ನರೇಗಾ ಕೆಲಸದಲ್ಲಿ 150 ಕೋಟಿ, ಎತ್ತಿನಹೊಳೆ ಯೋಜನೆಯಲ್ಲಿ 100 ಕೋಟಿ ನುಂಗಿದ್ದಾರೆ ಎಂದು ಎನ್ ಆರ್ ರಮೇಶ್ ಆರೋಪ ಮಾಡಿದ್ದಾರೆ.
ಕೋಟ್ಯಾಂತರ ರೂಪಾಯಿ ಹಣವನ್ನು ದಾಖಲೆಯಿಲ್ಲದೆಯೇ ನುಂಗಿದ್ದಾರೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಅವರಿಗೆ ಹಾಗೂ ಲೋಕಾಯುಕ್ತ ಅಧಿಕಾರಿಗಳಿಗೆ ಎನ್ ಆರ್ ರಮೇಶ್ ದೂರು ನೀಡಿದ್ದಾರೆ.